ಚುಕ್ಕಿ ಚಂದ್ರಮರ ಚೆಲುವ ನೋಡಿರಿ
ಬೆಂಗಳೂರು : ಹುಣ್ಣಿಮೆಯ ಪೂರ್ಣ ಚಂದ್ರ ಪಾಡ್ಯ, ಬಿದಿಗೆಗೇ ಕೊಂಚ ಕ್ಷೀಣಿಸಿದ್ದಾನಾದರೂ, ಸಂಜೆಯ ತಂಪನೆಯ ಹವೆಯಲ್ಲಿ ವಾಯುವಿಹಾರ ಮಾಡುತ್ತಾ ಶುಭ್ರ ಆಕಾಶದಲ್ಲಿ ಚುಕ್ಕಿ ಚಂದ್ರಮರ ನೋಡುವುದೇ ಒಂದು ಚೆಂದ.
ಚಂದ್ರನ ಚೆಲುವಿಗೆ ಚಂದ್ರನೇ ಸಾಟಿ ಅಲ್ಲವೇ. ಈಗಂತೂ ರಾಜ್ಯದಲ್ಲಿ ಮಳೆಯ ಕಾಟವಿಲ್ಲ. ಮಳೆರಾಯ ಸದ್ದಡಗಿದ ಮೊಡಗಳ ಮರೆಯಲ್ಲಿ ಈಹೊತ್ತು ವಿಶ್ರಾಂತ ಜೀವನ ನಡೆಸುತ್ತಿದ್ದಾನೆ. ಮಳೆ, ಗಾಳಿ, ಗುಡುಗು, ಸಿಡಿಲಿನ ಆರ್ಭಟವಿಲ್ಲದ ನೀಲಿ ಬಾನಿನಲ್ಲಿ ಮೋಡಗಳ ಅಡಚಣೆಯೂ ಇಲ್ಲ. ಚಂದ್ರನ ಚೆಲುವಿನ ಆಸ್ವಾದನೆಗೆ ಇದಕ್ಕಿಂತ ಪ್ರಶಸ್ತ ಕಾಲ ಮತ್ತೊಂದು ಬೇಕೆ.
ರಾಜ್ಯದೆಲ್ಲೆಡೆ ಒಣಹವೆ. ಹಾಗೆಂದ ಮಾತ್ರಕ್ಕೆ ಬಿರು ಬಿಸಿಲೂ ಇಲ್ಲಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವೂ ಕೊಂಚ ತಗ್ಗಿದೆ. ರಾತ್ರಿಯ ಕನಿಷ್ಠ ತಾಪಮಾನವೂ ಇಳಿದಿದೆ. ಕೊರೆವ ಚಳಿಯಿನ್ನೂ ರಾಜ್ಯಕ್ಕೆ ಕಾಲಿಟ್ಟಿಲ್ಲ. ಶಾಲು, ಸ್ವೆಟರ್ಗಳು ಪೆಟ್ಟಿಗೆಯಿಂದ ಹೊರಗೆ ಬಂದಿಲ್ಲ. ಉಲ್ಲನ್ ರಗ್ಗಳು ಮಾತ್ರ ಮುಂಜಾನೆಯ ಹಿತವಾದ ನಡುಕಕ್ಕೆ ಬೆಚ್ಚನೆಯ ಅನುಭವ ನೀಡಿವೆ.
ಮುನ್ಸೂಚನೆಯೂ ಇಂದಿನ ಹವಾಮಾನದ ಮುಂದುವರಿಕೆಯ ಭವಿಷ್ಯವನ್ನೇ ನುಡಿಯುತ್ತಿವೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ 14.9 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನವೇ ರಾಜ್ಯದ ಅತ್ಯಂತ ಕನಿಷ್ಠ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲೂ ಶುಭ್ರ ಆಕಾಶವಿದ್ದು, ರಾತ್ರಿಯ ಕನಿಷ್ಠ ಉಷ್ಣಾಂಶ 17 ಡಿಗ್ರಿ ತಲುಪೀತು ಎನ್ನುತ್ತದೆ ಹವಾಮಾನ ವೀಕ್ಷಣಾಲಯ. ಬಿಡುವಿದ್ದರೆ, ಬೆಂಗಳೂರಿನ ಉದ್ಯಾನಗಳಲ್ಲಿ ಈವ್ನಿಂಗ್ ಹೊತ್ತಿನಲ್ಲಿ ಅಡ್ಡಾಡಿ, ಬಿಸಿ ಬಿಸಿ ಕಡಲೇಕಾಯಿ ತಿನ್ನುತ್ತಾ (ಬಸವನ ಗುಡಿಯ ಕಡಲೇಕಾಯಿ ಪರಿಷೆಯೂ ಹತ್ತಿರವಾಗುತ್ತಿದೆ), ಪಾನೀಪುರಿ ಅಂಗಡಿಯ ಬಳಿ ಸಾರುತ್ತಾ, ಮುಗಿಲಿನೆಡೆ ಮುಖಮಾಡಿ ಚಂದ್ರನ ಚೆಂದವ ಸವಿಯುವ ಅವಕಾಶ ತಪ್ಪಿಸಿಕೊಳ್ಳದಿರಿ.