ಸರ್ಕಾರದೊಂದಿಗೆ ಧಾರ್ಮಿಕ ಸಂಸ್ಥಾನಗಳು ಕೈಜೋಡಿಸಲು ಅದ್ವಾನಿ ಮನವಿ
ಉಡುಪಿ : ಕೇವಲ ಸರ್ಕಾರದಿಂದ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ವಾದ್ದರಿಂದ, ಧಾರ್ಮಿಕ ಸಂಸ್ಥಾನಗಳು ಸರ್ಕಾರದೊಂದಿಗೆ ಕೈ ಜೋಡಿಸಿದರೆ ಮಾತ್ರ ಅಭೂತಪೂರ್ವವಾದುದನ್ನು ಸಾಧಿಸಬಹುದು ಎಂದು ಕೇಂದ್ರ ಗೃಹ ಸಚಿವ ಎಲ್.ಕೆ. ಅದ್ವಾನಿ ಅಭಿಪ್ರಾಯ ಪಟ್ಟಿದ್ದಾರೆ.
ರಥ ಬೀದಿಯ ಕನಕ ಮಂಟಪ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡುತ್ತಿದ್ದರು. ಇದಕ್ಕೆ ಮುನ್ನ ಅವರು, ಉಡುಪಿ ಕೃಷ್ಣ ಮಠದ ವಸಂತ ಮಹಲಿನಲ್ಲಿ ನಿರ್ಮಾಣಗೊಳ್ಳಲಿರುವ ಕನಕ ಸಭಾ ಮಂಟಪದ ಶಂಕು ಸ್ಥಾಪನೆಯನ್ನು ನೆರವೇರಿಸಿದ್ದರು. ಎರಡು ದಿನಗಳ ಕನಕ ಜಯಂತಿ ಉತ್ಸವದಲ್ಲಿ ಭಾಗವಹಿಸಲು ಅವರು ದೇವಾಲಯಗಳ ಪಟ್ಟಣ ಉಡುಪಿಗೆ ಸೋಮವಾರ ಒಂದು ದಿನದ ಭೇಟಿ ನೀಡಿದ್ದರು.
ಭಕ್ತಿ ಪಂಥಕ್ಕೆ ನಿಮ್ನ ವರ್ಗದ ಕೊಡುಗೆ ಅಪಾರವಾಗಿದೆ. ಜಾತಿ ರಹಿತ ಸಮಾಜ ನಿಲ್ದಾಣ, ಮೇಲು- ಕೀಳು, ಭೇದ-ಭಾವ ನಿವಾರಣೆಯನ್ನೊಳಗೊಂಡ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಭಾರತದ ಸ್ವಾತಂತ್ರ್ಯ ಚಳವಳಿಯ ಹಿಂದೆಯೂ ಸಾಧು ಸಂತರ ಪಾತ್ರವಿದೆ. ಸ್ವಾಮಿ ವಿವೇಕನಾಂದರು ತಾಯ್ನೆಲದ ಪ್ರೀತಿಯನ್ನು ಅತ್ಯಂತ ಶ್ರೇಷ್ಠವಾದುದೆಂದು ಪ್ರತಿಪಾದಿಸಿದ್ದರು ಎಂದು ಅದ್ವಾನಿ ಹೇಳಿದರು.
ಮತ್ತೊಂದು ಪ್ರತ್ಯೇಕ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪೋಖ್ರಾನ್ ಅಣು ಸ್ಫೋಟವನ್ನು ಬಲವಾಗಿ ಸಮರ್ಥಿಸಿಕೊಂಡರು. ಭಾರತದ ಸುರಕ್ಷತೆಗೆ ಅಣು ಸ್ಫೋಟ ಸಹಕಾರಿಯಾಗಿದೆ ಎಂದು ಹೇಳಿದ ಅದ್ವಾನಿ, ಕಾಶ್ಮೀರದ ಉದ್ವಿಗ್ನತೆ ನಿವಾರಿಸಲು ಸರ್ಕಾರ ಪರಿಹಾರ ಕಾರ್ಯಕ್ರಮ ರೂಪಿಸಿದೆ. ಅಧಿಕಾರ ವಿಕೇಂದ್ರೀಕರಣದ ಉದ್ದೇಶ ಮತ್ತು ಜನತೆಯ ಬೇಡಿಕೆಯ ಮೇರೆಗೆ ಉತ್ತರಾಂಚಲ , ಛತ್ತೀಸ್ಗಢ ರಾಜ್ಯಗಳನ್ನು ರೂಪಿಸಲಾಗಿದೆ. ನರ್ಮದಾ ಅಣೆಕಟ್ಟೆ ಯೋಜನೆಗೆ ಸಂಬಂಧಿಸಿದ ಸುಪ್ರಿಂಕೋರ್ಟ್ ತೀರ್ಪಿನಿಂದ ಮಧ್ಯಪ್ರದೇಶ, ಗುಜರಾತ್ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಅಭೂತ ಪೂರ್ವ ಬಿಗಿ ಭದ್ರತೆ, ಅಘೋಷಿತ ಕರ್ಫ್ಯೂ
ಕೇಂದ್ರ ಗೃಹ ಸಚಿವರ ಆಗಮನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಅಭೂತಪೂರ್ವ ಭದ್ರತೆಯಿಂದಾಗಿ ಉಡುಪಿಯ ರಥ ಬೀದಿಯ ಅಂಗಡಿ ಮುಂಗಟ್ಟುಗಳು, ಬ್ಯಾಂಕುಗಳು ಮುಚ್ಚಿದ್ದವು. ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ನಿಷೇಧ ಹೇರಿದ್ದುದರಿಂದ ಬನ್ನಂಜೆ- ಕಲ್ಸಂಕ, ಬಡಗು ಪೇಟೆಗಳಲ್ಲಿ ಅಘೋಷಿತ ಕರ್ಫ್ಯೂ ಜಾರಿಯಾದಂತಿತ್ತು .
ಮಂಗಳೂರು ವಿವಿ ಕುಲಪತಿ ಪ್ರೊ, ಗೋಪಾಲ್ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಬಿಗಿ ಭದ್ರತೆಯಿಂದ ತೊಂದರೆ ಅನುಭವಿಸಿದರು. ಕಾರ್ತೀಕ ಸೋಮವಾರದ ಪ್ರಯುಕ್ತ ಅನಂತೇಶ್ವರ, ಚಂದ್ರೇಶ್ವರ ದೇವರ ದರ್ಶನಕ್ಕಾಗಿ ಆಗಮಿಸಿದ್ದ ಅಧಿಕ ಸಂಖ್ಯೆಯ ಯಾತ್ರಾರ್ಥಿಗಳು ಭದ್ರತಾ ವ್ಯವಸ್ಥೆಗಾಗಿ ನಿರ್ಮಿಸಿದ್ದ ತಡೆಬೇಲಿಯನ್ನು ದಾಟಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಅದ್ವಾನಿಯವರ ಸಭೆಗೆ ಪಾಸ್ಗಳನ್ನು ವಿತರಿಸಿದ್ದುದರಿಂದ ಸಭೆಯಲ್ಲಿ ಖಾಲಿ ಕುರ್ಚಿಗಳು ಎದ್ದು ಕಾಣುತ್ತಿದ್ದವು.
(ಮಂಗಳೂರು ಪ್ರತಿನಿಧಿಯಿಂದ)