ಹುಬ್ಬಳ್ಳಿಯ ತಾರಿಹಾಳ ಇಂಜಿನಿಯರಿಂಗ್ ಕಾಲೇಜು ಇನ್ನಿಲ್ಲ
ಬೆಳಗಾವಿ : ಹುಬ್ಬಳ್ಳಿಯ ತಾರಿಹಾಳ ಎಸ್ಜಿಇಸಿಎಎಸ್ ರೂರಲ್ ಇಂಜಿನಿಯರಿಂಗ್ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಎಸ್. ರಾಜಶೇಖರಯ್ಯ ಹೇಳಿದ್ದಾರೆ .
ಬೆಳಗಾವಿಯಲ್ಲಿ ಪತ್ರಕರ್ತರೊಡನೆ ಮಾಡತನಾಡುತ್ತಾ ಅವರು ಅಖಿಲ ಭಾರತ ತಾಂತ್ರಿಕ ಮಂಡಳಿ ಮತ್ತು ಕರ್ನಾಟಕ ವಿವಿಯ ಅನುಮೋದನೆಯಾಂದಿಗೆ ಈ ಕಾಲೇಜಿಗೆ 98-99 ರಲ್ಲಿ ನೀಡಿದ ಮಾನ್ಯತೆಯನ್ನು ರದ್ದು ಪಡಿಸಲಾಗಿದೆ ಎಂದರು. ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಅವರ ಮೆರಿಟ್ ಆಧಾರದ ಮೇಲೆ ಇತರ ಕಾಲೇಜುಗಳಿಗೆ ವರ್ಗಾಯಿಸಲಾಗುವುದು ಎಂದು ರಾಜಶೇಖರಯ್ಯ ತಿಳಿಸಿದರು.
ಕಳೆದ ಆಗಸ್ಟ್ನಲ್ಲಿ ಕಾಲೇಜಿಗೆ ಭೇಟಿ ನೀಡಿದ ಸ್ಥಳೀಯ ತನಿಖಾ ಸಮಿತಿ ಕಾಲೇಜಿನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಹೇಳಿತ್ತು. ಆದರೆ ಆ ಬಗ್ಗೆ ಕಾಲೇಜಿನ ಪ್ರಾಚಾರ್ಯರು ಕಳಿಸಿರುವ ವರದಿ ತೃಪ್ತಿಕರವಾಗಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದರೂ ಕಾಲೇಜು ಅದನ್ನು ಈವರೆಗೆ ಒದಗಿಸಿಲ್ಲ . ವಿಶ್ವ ವಿದ್ಯಾಲಯದ ಕಾರ್ಯಕಾರಿ ಪರಿಷತ್ ನೇಮಿಸಿದ್ದ ವಿಶೇಷ ಸಮಿತಿ ಕೂಡ ಕಾಲೇಜಿಗೆ ಭೇಟಿ ನೀಡಿದ್ದು, ಮಾನ್ಯತೆ ರದ್ದುಗೊಳಿಸಲು ಶಿಫಾರಸು ಮಾಡಿದೆ ಎಂದು ಕಾಲೇಜಿನ ಮಾನ್ಯತೆ ರದ್ದಾಗಿರುವ ಹಿನ್ನೆಲೆಯನ್ನು ರಾಜಶೇಖರಯ್ಯ ವಿವರಿಸಿದರು.
(ಇನ್ಫೋ ವಾರ್ತೆ)