7 ವರ್ಷಗಳಲ್ಲಿ ಕರ್ನಾಟಕಕ್ಕೆ 12,000 ಕೋಟಿ ವಿಶ್ವಬ್ಯಾಂಕ್ ನೆರವು
ಬೆಂಗಳೂರು : ಭಾರತದ ರಾಜ್ಯಗಳ ಆರ್ಥಿಕ ಸುಧಾರಣೆ ಯೋಜನೆಗಳಿಗೆ ನೆರವು ನೀಡುವ ವಿಷಯದಲ್ಲಿ ವಿಶ್ವಬ್ಯಾಂಕ್ ಯಾವುದೇ ನಿಬಂಧನೆ ಹಾಕುವುದಿಲ್ಲ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಜೇಮ್ಸ್ ಡಿ. ವೊಫೆನ್ಸನ್ ತಿಳಿಸಿದ್ದಾರೆ.
ಇನ್ನು 7 ವರ್ಷಗಳ ಅವಧಿಯಲ್ಲಿ ಕರ್ನಾಟಕದ ವಿವಿಧ ಸಾಮಾಜಿಕ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಯೋಜನೆಗಳಿಗೆ ವಿಶ್ವಬ್ಯಾಂಕ್ 2.5 ಶತಕೋಟಿ ಡಾಲರ್ (12 ಸಾವಿರ ಕೋಟಿ ರುಪಾಯಿ) ನೆರವು ನೀಡಲು ಒಪ್ಪಿದೆ. ನಾವು ಸುಧಾರಣಾ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವಂತೆ ಒತ್ತಿ ಹೇಳುತ್ತಿದ್ದೇವೆ. ಅದನ್ನು ಕೇಳುವುದು ಬಿಡುವುದು ದೇಶ ಅಥವಾ ಸರ್ಕಾರಗಳಿಗೆ ಬಿಟ್ಟದ್ದು ಎಂದು ವೊಫೆನ್ಸನ್ ಸುದ್ದಿಗಾರರಿಗೆ ಹೇಳಿದರು.
ಉತ್ತಮ ಆಡಳಿತ, ಅದರಲ್ಲಿ ಪಾರದರ್ಶಕತೆ, ಲಂಚಗುಳಿಗಳನ್ನು ಮಟ್ಟ ಹಾಕುವುದು, ಆರ್ಥಿಕ ವಿಗತಿಗೆ ಕಾರಣವಾಗಬಲ್ಲ ಹೆಜ್ಜೆಗಳನ್ನು ಇಡದಿರುವುದು- ಇಷ್ಟು ಮಾಡಿದಲ್ಲಿ ಅಭಿವೃದ್ಧಿ ತಂತಾನೆ ಆಗುತ್ತದೆ, ಬಡಬಗ್ಗರ ಜೀವನ ಕ್ರಮವೂ ಉತ್ತಮಗೊಳ್ಳುತ್ತದೆ. ಅದು ಬಿಟ್ಟು ಶ್ರೀಮಂತ ವರ್ಗದವರಿಗೇ ವಿನಾಯಿತಿಗಳನ್ನು ನೀಡುತ್ತಾ ಹೋದರೆ ಅಭಿವೃದ್ಧಿಯ ಬಗ್ಗೆ ಮರೆಯಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಬುಧವಾರ ಮುಖ್ಯಮಂತ್ರಿ ಕೃಷ್ಣ ಅವರ ಜೊತೆ ಚರ್ಚಿಸಿದ್ದೇನೆ. ಅವರ ಯೋಜನೆಗಳು ಶ್ಲಾಘನಾರ್ಹ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಹೆಸರು ಮಾಡಿರುವ ಕರ್ನಾಟಕ ಇವುಗಳ ಪ್ರಗತಿಯನ್ನು ಉಪಯೋಗಿಸಿಕೊಂಡು ಬಡತನವನ್ನು ಹೋಗಲಾಡಿಸುವ ಯತ್ನ ಮಾಡಬೇಕು. ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ವಿವಿಧ ಯೋಜನೆಗಳಿಗೆ ವಿಶ್ವಬ್ಯಾಂಕ್ ನೆರವು ನೀಡಲಿದೆ ಎಂದು ವೊಫೆನ್ಸನ್ ಹೇಳಿದರು.
ಮೂರು ದಿನಗಳ ಕರ್ನಾಟಕದ ತಮ್ಮ ಭೇಟಿಯಲ್ಲಿ ಬೆಂಗಳೂರು ನಗರವನ್ನಷ್ಟೇ ಅಲ್ಲದೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿಶ್ವಬ್ಯಾಂಕ್ ನೆರವಿನ ಕೆಲವು ಯೋಜನೆಗಳನ್ನು ಖುದ್ದು ವೀಕ್ಷಿಸಿದರು. ವಿಶ್ವ ಪರಂಪರೆಗಳಲ್ಲೊಂದಾದ ಹಂಪಿಗೆ ಬುಧವಾರ ಭೇಟಿ ನೀಡಿ, ಅದೊಂದು ವಿಶ್ವ ಪರಂಪರೆ. ಅದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ, ವಿಶ್ವಕ್ಕೆ ಅರ್ಪಿಸಿ ಎಂದು ಸಲಹೆ ನೀಡಿದರು. ತಮ್ಮ ಭೇಟಿಯ ಅಂತಿಮ ದಿನವಾದ ಗುರುವಾರ ಸ್ಕೂಲ್ನೆಟ್ ಅಭಿವೃದ್ಧಿಗೊಳಿಸಿರುವ ಶಿಕ್ಷಣ ಕಾರ್ಯಕ್ರಮಗಳನ್ನು ತಿಳಿದುಕೊಂಡರು. ಇನ್ಫೋಸಿಸ್ ಸಂಸ್ಥೆಯ ಕಮ್ಮಟವೊಂದಕ್ಕೂ ಭೇಟಿ ಇತ್ತರು.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...