ಬೆಂಗಳೂರು ದೂರದರ್ಶನಕ್ಕೆ ನಿತ್ಯೋತ್ಸವದ ಸಿಂಚನ
ಬೆಂಗಳೂರು : ಯುವ ಪ್ರತಿಭೆಗಳಲ್ಲಿನ ಸುಗಮ ಸಂಗೀತ ಪ್ರತಿಭೆಯನ್ನು ಹೆಕ್ಕುವ ಉದ್ದೇಶದ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿತ್ಯೋತ್ಸವ ಕಾರ್ಯಕ್ರಮ ಬೆಂಗಳೂರು ದೂರದರ್ಶನದಲ್ಲಿ ಪ್ರಾರಂಭವಾಗಿದ್ದು, ಸುಮಾರು 60 ಕಂತುಗಳಲ್ಲಿ ಈ ಕಾರ್ಯಕ್ರಮ ವಾರಕ್ಕೊಮ್ಮೆ ಪ್ರಸಾರವಾಗಲಿದೆ.
ನಿತ್ಯೋತ್ಸವ ಕಾರ್ಯಕ್ರಮವನ್ನು ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಸಂಸ್ಥೆ (ಎಂಎಸ್ಐಎಲ್) ರೂಪಿಸಿದೆ. ಎಂಎಸ್ಐಎಲ್ನ ವ್ಯವಸ್ಥಾಪಕ ನಿರ್ದೇಶಕ ಐ.ಎಂ. ವಿಠ್ಠಲಮೂರ್ತಿ ಅವರ ಪ್ರಕಾರ, ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಹಾಗೂ ಕನ್ನಡ ಸುಗಮ ಸಂಗೀತ ಪರಂಪರೆಯನ್ನು ವಿಸ್ತರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಸ್ಪರ್ಧೆಯು ಹಿರಿಯರು ಮತ್ತು ಕಿರಿಯರು ಎರಡು ವಿಭಾಗಗಳಲ್ಲಿ ನಡೆಯಲಿದೆ. ಕಿರಿಯರ ವಿಭಾಗದಲ್ಲಿ ಎಂಟರಿಂದ ಹತ್ತನೇ ಇಯತ್ತೆಯ ವಿದ್ಯಾರ್ಥಿಗಳು ಹಾಗೂ 10 ನೇ ಇಯತ್ತೆಯ ನಂತರದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಬಹುದು. ಪೂರ್ವಭಾವಿ ಸುತ್ತಿನ ಸ್ಪರ್ಧೆಗಳು ಈಗಾಗಲೇ ಮುಕ್ತಾಯವಾಗಿದ್ದು, 1700 ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಅಂತಿಮ ಹಂತದ ಸ್ಪರ್ಧೆಯು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಕುಮಾರ್ ವಾಪಸ್ಸಾತಿಯ ನಂತರ ನಡೆಯಲಿದೆ. ಫೈನಲ್ಸ್ ಕಾರ್ಯಕ್ರಮವನ್ನು ಬೆಂಗಳೂರು ದೂರದರ್ಶನ ನೇರ ಪ್ರಸಾರ ಮಾಡುವುದು.
ಪ್ರತಿ ವಿಭಾಗದಲ್ಲಿ ಓರ್ವ ಗಾಯಕಿ ಮತ್ತು ಗಾಯಕ ಸೇರಿದಂತೆ ಎರಡೂ ವಿಭಾಗಗಳಿಂದ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಧ್ವನಿ ಮುದ್ರಿಕೆಯಲ್ಲಿ ಹಾಡುವ ಅವಕಾಶ ಕಲ್ಪಿಸಲಾಗುವುದು. ಪ್ರತಿ ಶುಕ್ರವಾರ ದೂರದರ್ಶನದಲ್ಲಿ ಪ್ರಸಾರವಾಗುವ ನಿತ್ಯೋತ್ಸವ ಕಾರ್ಯಕ್ರಮದ ಮೊದಲ ಸಂಚಿಕೆ ನವಂಬರ್ 3 ರಂದು ಪ್ರಸಾರವಾಗಿದೆ.
(ಇನ್ಫೋ ವಾರ್ತೆ)