ಮಂಗಳೂರಿನಲ್ಲಿ ನಕಲಿ ಪಾಸ್ಪೋರ್ಟ್ ಜಾಲ, ಇಬ್ಬರ ಬಂಧನ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೋಲೀಸ್ ಠಾಣೆಗಳ ನಕಲಿ ಸೀಲುಗಳನ್ನು ಸೃಷ್ಟಿಸಿ, ಪಾಸ್ಪೋರ್ಟ್ ಕಚೇರಿಗೆ ನಕಲಿ ಮಾಹಿತಿ ಸಂಗ್ರಹಣಾ ಅರ್ಜಿಗಳನ್ನು ನೀಡಿ ವಂಚಿಸುತ್ತಿದ್ದ ಆರೋಪದ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ಸೀಲುಗಳು ಹಾಗೂ ಪಾಸ್ಪೋರ್ಟ್ ಸಂಗ್ರಹಣಾ ಅರ್ಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಉಪ್ಪಿನಂಗಡಿ ಕಾಡಮನೆಯ ಯು.ಎಂ. ಹೈದರ್ ಹಾಗೂ ಮಂಗಳೂರಿನ ಪಾಯಿಸ್ ಕಾಂಪೌಂಡಿನ ಅಬ್ದುಲ್ ಸಮದ್ ಎಂದು ಪೊಲೀಸರು ತಿಳಿಸಿದ್ದಾರೆ. ಅಬ್ದುಲ್ ಸಮದ್ ನಗರದ ಏರ್ಲಿಂಕ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾನೆ ಎನ್ನಲಾಗಿದೆ.
ಆರೋಪಿಗಳು ಸಲ್ಲಿಸಿರುವ ನಕಲಿ ಫಾರ್ಮ್ಗಳು ಬೆಂಗಳೂರು ಪಾಸ್ಪೋರ್ಟ್ ಕಚೇರಿ ತಲುಪುತ್ತಿದ್ದು, ಇದರಿಂದಾಗಿ ಪೊಲೀಸ್ ದಾಖಲೆಗಳಲ್ಲಿ ಇರುವ ವ್ಯಕ್ತಿಗಳು ಪಾಸ್ಪೋರ್ಟ್ ಪಡೆಯುವುದು ಸುಲಭವಾಗುತ್ತಿತ್ತು . ವಂಚನೆಯ ಜಾಲದಲ್ಲಿ ಬೆಂಗಳೂರು ಪಾಸ್ಪೋರ್ಟ್ ಕಚೇರಿಯ ವ್ಯಕ್ತಿಗಳು ಕೂಡ ಪಾಲ್ಗೊಂಡಿರುವ ಶಂಕೆಗಳಿವೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ನಕಲಿ ಪಾಸ್ಪೋರ್ಟ್ ಪ್ರಕರಣವೊಂದರ ತನಿಖೆಯಿಂದಾಗಿ ಈ ಜಾಲ ಹೊರ ಬಿದ್ದಿದೆ. ಅಪರಾಧ ಪತ್ತೆದಳದ ಎಸ್ಪಿ ಎಚ್.ಡಿ. ಮೆಂಡೊನ್ಸಾ ಹಾಗೂ ಸಿಬ್ಬಂದಿಗಳಾದ ವಿಶ್ವನಾಥ, ಸೀತಾರಾಮ, ವಸಂತ, ಅಶೋಕ, ವಿಶ್ವನಾಥ, ಶಶಿಧರ ಶೆಟ್ಟಿ, ದಿನೇಶ, ಪ್ರಭಾಕರ ಅವರು ನಕಲಿ ಪಾಸ್ಪೋರ್ಟ್ ಜಾಲ ಪತ್ತೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
(ಮಂಗಳೂರು ಪ್ರತಿನಿಧಿಯಿಂದ)