ಮಂಗಳೂರು ಮಜಗಾಂವ್ ಡಾಕ್ ಯಾರ್ಡ್ ಕಂಪೆನಿ ಇನ್ನಿಲ್ಲ
ಮಂಗಳೂರು: ಸಾಗರದಾಳದಿಂದ ತೈಲ ನಿಕ್ಷೇಪ ಪತ್ತೆ ಹಚ್ಚಿ ಬಾವಿ ಕೊರೆಯಲು ಬೇಕಾಗುವ ರಿಗ್ ನಿರ್ಮಾಣ ಮತ್ತು ತೈಲ ಬಾವಿಗಳಿಗೆ ಅಗತ್ಯವಾದ ಪೈಪ್ಗಳಿಗೆ ಕೋಟಿಂಗ್ ಹಾಕುವ ಕೆಲಸ ನಿರ್ವಹಿಸುತ್ತಿದ್ದ, ಮಜಗಂವ್ ಡಾಕ್ ಮಂಗಳೂರು ಯಾರ್ಡ್ ಶುಕ್ರವಾರದಂದು ಶಾಶ್ವತವಾಗಿ ಮುಚ್ಚಿತು.
ಪಣಂಬೂರು ಬಂದರಿನಲ್ಲಿ ಭಾರತ ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಈ ಕಂಪೆನಿಯ ಮುಖ್ಯ ಶಾಖೆ ಮುಂಬಯಿಯಲ್ಲಿದೆ. ಕಾರ್ಮಿಕರ ಸಣ್ಣ ಪುಟ್ಟ ಜಗಳ ಮತ್ತು ಅಶಾಂತಿಯ ಕಾರಣದಿಂದ ಕ್ಷೀಣಿಸತೊಡಗಿದ ಕಂಪೆನಿಯ ಪ್ರಗತಿ, ಈಗ ಮುಚ್ಚುವ ಹಂತಕ್ಕೆ ತಲುಪಿದೆ.
ಕಂಪೆನಿ ಮುಚ್ಚುತ್ತಿರುವುದರಿಂದ ಕಾಮಿಂಕರನ್ನು ಮುಂಬಯಿ ಶಾಖೆಯಲ್ಲಿ ಕೆಲಸ ಮಾಡುವಂತೆ ಆಡಳಿತ ವರ್ಗ ಹೇಳಿತ್ತು. ಆದರೆ ಅಲ್ಲಿ ಕೆಲಸ ಮಾಡುವ ನೌಕರರಿಗೆ ನೀಡುತ್ತಿದ್ದ ವೇತನಕ್ಕೆ ಸಮನಾಗಿ ಇಲ್ಲಿಂದ ಹೋಗಿರುವ ನೌಕರರಿಗೂ ವೇತನ ನೀಡಬೇಕು ಎನ್ನುವುದನ್ನು ಕಂಪೆನಿ ಒಪ್ಪಿಲ್ಲ. ಇದರಿಂದಾಗಿ 83 ಮಂದಿ ನೌಕರರು ಗತ್ಯಂತರವಿಲ್ಲದೇ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ. ಉಳಿದ ಸುಮಾರು 120 ಮಂದಿ ಕಾರ್ಮಿಕರು ತಮ್ಮ ಕುಟುಂಬಗಳನ್ನು ಸಲಹಲು ಬೇರೆ ದಾರಿ ಕಾಣದೇ ಮುಂಬಯಿ ಶಾಖೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.
(ಇನ್ಫೋ ವಾರ್ತೆ)