ಬಹುತೇಕ ರಾಜ್ಯದೆಲ್ಲೆಡೆ ಒಣಹವೆ
ಬೆಂಗಳೂರು : ಬೆಂಗಳೂರಿನಲ್ಲಿ ಬುಧವಾರ ಆಕಾಶ ಶುಭ್ರವಾಗಿತ್ತು. ಮೋಡಗಳ ತಿಕ್ಕಾಟವೂ ಇರಲಿಲ್ಲ. ಗುಡುಗಿನ ಆರ್ಭಟವೂ ಇರಲಿಲ್ಲ. ಆದರೆ, ಗುಡುಗು ಸಿಡಿಲನ್ನೂ ಮೀರಿಸುವ ಪಟಾಕಿಯ ಆರ್ಭಟ ಎಲ್ಲೆಡೆ ಆಗಲೇ ಆರಂಭವಾಗಿದೆ. ಇನ್ನು ಮೂರು ದಿನ ಆಟಂಬಾಂಬ್, ಲಕ್ಷ್ಮೀ ಪಟಾಕಿ, ಆನೆ ಪಟಾಕಿಗಳು ಕಿವಿಗಡಚಿಕ್ಕುವಂತೆ ಸಿಡಿಯುತ್ತಲೇ ಇರುತ್ತವೆ.
ಬುಧವಾರವಂತೂ ಬೆಂಗಳೂರಲ್ಲಿ ಸೊಗಸಾದ ಹಾಗೂ ಹಿತವಾದ ಬಿಸಿಲಿನ ಅನುಭವ. ಮಕ್ಕಳಿಗಂತೂ ಖುಷಿಯೋ ಖುಷಿ. ಅಪ್ಪ ತಂದ ಪಟಾಕಿಯನ್ನು ಶಾಲೆಗೆ ಹೋಗುವ ಮೊದಲೆ ಕೆಲವು ಮಕ್ಕಳು ಹಚ್ಚಿ ಆನಂದಿಸಿದರು. ಗುರುವಾರವೂ ಬೆಂಗಳೂರಿನಲ್ಲಿ ಮಳೆ ಬೀಳುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಗುರುವಾರ ಬೆಂಗಳೂರಿನಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಲುಪುವ ಸೂಚನೆ ಇದೆ. ಅಂದರೆ, ಹಣತೆಗಳ ಹಚ್ಚಿ, ಪಟಾಕಿ ಸಿಡಿಸಲು ಮಳೆರಾಯನ ಕಾಟವಿಲ್ಲ ಎಂದು ಹೇಳಬಹುದು.
ಈ ಮಧ್ಯೆ ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದೆ. ಮೂರ್ನಾಲ್ಕು ದಿನ ಬಿಡದೆ ಸುರಿದ ಮಳೆರಾಯ ಬಿಡುವು ಪಡೆದು ವಿಶ್ರಾಂತಿ ಪಡೆಯುತ್ತಿದ್ದಾನೆ. ಹೀಗಾಗಿ ಕರಾವಳಿಯಲ್ಲಿ ಒಣಹವೆ ಮೂಡಿತ್ತು. ಒಳನಾಡಿನಲ್ಲೂ ಒಣಹವೆಯದೇ ಕಾರುಭಾರು. ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತಲೂ ಹೆಚ್ಚಾಗಿತ್ತು. ಗುಲ್ಬರ್ಗಾದಲ್ಲಿ ದಿನದ ಅತಿಹೆಚ್ಚು ತಾಪಮಾನ 34.4 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ ಮಂಡ್ಯದಲ್ಲಿ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಏನೂ ಕಂಡುಬರುವುದಿಲ್ಲ.