ದಿಢೀರ್ ಭೂಕುಸಿತ: 200 ಕುಟುಂಬಗಳ ಸ್ಥಳಾಂತರ ಸಂಭವ
ತುಮಕೂರು: ಜಿಲ್ಲೆಯ ಕಲ್ಲೂರಿನಲ್ಲಿ ದಿಢೀರ್ ಭೂಕುಸಿತ ಸಂಭವಿಸಿರುವ ಹಿನ್ನಲೆಯಲ್ಲಿ ಹಳ್ಳಿಯ 200 ಕುಟುಂಬಗಳನ್ನು ಸ್ಥಳಾಂತರಿಸಲು ಯೋಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಭೂಕುಸಿತದಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಹಳ್ಳಿಯ ಎಲ್ಲಾ 200 ಕುಟುಂಬಗಳನ್ನೂ ಸ್ಥಳಾಂತರಿಸುವುದು ಸೂಕ್ತ ಎಂದು ಭೂವಿಜ್ಞಾನಿಗಳು ಸಲಹೆ ಮಾಡಿದ್ದಾರೆ. ಊರಿನ ಹೊರಭಾಗದಲ್ಲಿರುವ ನಾಲ್ಕು ಎಕರೆ ಖಾಸಗಿ ಜಾಗದಲ್ಲಿ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.
ಕಲ್ಲೂರಿನ ಸಂತ್ರಸ್ಥರಿಗೆ ಆಶ್ರಯ ಯೋಜನೆ ಮೂಲಕ ಮನೆ ನಿರ್ಮಿಸಿಕೊಡಲು ಯೋಚಿಸಲಾಗಿದ್ದು, ಪ್ರಕೃತಿ ವಿಕೋಪ ನಿಧಿಯಿಂದ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲದ್ದರಿಂದ ಸರಕಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಕಳೆದುಕೊಳ್ಳುವ ಎಲ್ಲ ಕುಟುಂಬಗಳಿಗೆ ತಲಾ 10 ಸಾವಿರ ರುಪಾಯಿ ನೀಡುವಂತೆ ಪ್ರಭಾರ ಜಿಲ್ಲಾಧಿಕಾರಿ ಮಣಿವಣ್ಣನ್ ಶಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮನೆಗಳಲ್ಲಿ ನೀರು : ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಲ್ಲರಿಗೂ ಸೂಚನೆ ನೀಡಿದ್ದರೂ ಹೋಗಲು ಯಾರೂ ಸಿದ್ಧರಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಡೀ ಗ್ರಾಮದಲ್ಲಿ ನೇಕಾರರ ಕುಟುಂಬಗಳೇ ಅಧಿಕವಾಗಿದ್ದು, ಮನೆಗಳು ಬಿರುಕುಬಿಟ್ಟಿರುವುದರಿಂದ ವಾಸಕ್ಕೆ ಯೋಗ್ಯವಾಗಿಲ್ಲ. ಈ ನಡುವೆ ಸತತ ಮಳೆಯಿಂದ ಕಲ್ಲೂರು ಕೆರೆ ಕೋಡಿ ಹೋಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿದೆ. ನೇಕಾರರು ಮನೆಗಳಲ್ಲಿ ನೆಯ್ಗೆ ಕೆಲಸ ಮಾಡಲು ತೆಗೆದಿದ್ದ ಗುಂಡಿಗಳು ನೀರಿನಿಂದ ತುಂಬಿವೆ.
(ಇನ್ಫೋ ವರದಿ)