ಮತ್ತೆ ಸೈಕ್ಲೋನ್ ಇಫೆಕ್ಟಾ ?
ಬೆಂಗಳೂರು : ಇವತ್ತು ಬೆಂಗಳೂರಿನ ಕಪ್ಪು ರಸ್ತೆಗಳಿಗೆ, ದೊಡ್ಡ ದೊಡ್ಡ ಬಿಲ್ಡಿಂಗ್ಗಳಿಗೆ ಬಿಸಿಲೇ ಬೀಳಲಿಲ್ಲ. ಹುಡುಗಿಯರ ಲೆದರ್ ಚಪ್ಪಲ್ಗಳೆಲ್ಲಾ ಕಳೆದ ನಾಲ್ಕು ದಿನಗಳ ಪ್ರತೀ ಸಂಜೆ ರೆಚ್ಚೆ ಕಟ್ಟಿ ಸುರಿದ ಮಳೆಗೆ ಕಿತ್ತು ಹೋಗಿವೆ. ದೀಪಾವಳಿ ಆಫರ್ ಬಂದಿದೆ ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಾ , ಮತ್ತೆ ಸ್ವಲ್ಪವೇ ವಟಗುಟ್ಟುತ್ತಾ ಒದ್ದೆ, ಕರಿ ರಸ್ತೆಯ ಮೇಲೆ ಅವರು ಕೆಸರು ಗುಂಡಿಗಳ ತಪ್ಪಿಸಿಕೊಂಡು ಬಳುಕುತ್ತಾ ಹೆಜ್ಜೆ ಹಾಕುತ್ತಾರೆ.
ಬೆಂಗಳೂರು ಹೀಗೆ ಮಳೆಯ ಮೂಡಿನಲ್ಲಿ ಮುಳುಗಿ ಹೋದರೆ ಅದಕ್ಕೆ ಸೈಕ್ಲೋನ್ ಇಫೆಕ್ಟೇ ಕಾರಣವಾಗಿ ಬಿಡುತ್ತದೆ. ಆಂಧ್ರ ಪ್ರದೇಶದ ಸೈಕ್ಲೋನ್ ಬೆಂಗಳೂರಿನ ಐಸ್ ಕ್ರೀಂ ಅಂಗಡಿಗಳಿಗೆ ಏಟು ಕೊಡುವುದರ ಹಿಂದೆ ಏನು ಸೋಜಿಗವಿರಬಹುದು ? ದೇಶದ ಯಾವ ಮೂಲೆಯಲ್ಲಿ ಸೈಕ್ಲೋನ್ ಬಂದರೂ ಅದು ಬೆಂಗಳೂರಿನಲ್ಲಿ ಈ ಪಿರಿಪಿರಿ ಮಳೆಯ ಇಫೆಕ್ಟ್ ಕೊಡುತ್ತದೆ. ಶನಿವಾರ ಸರಕಾರಿ ಶಾಲೆಯ ಬೆಂಚಿನಲ್ಲಿ ಕುಳಿತ ಪುಟಾಣಿಗಳೆಲ್ಲಾ ಗುಡುಗಿನ ಸದ್ದಿಗೆ ಬೆಚ್ಚುತ್ತಾ ಮಿಂಚು ಬಂದಾಗಲೇ ಕೈಯಲ್ಲಿ ಕಿವಿ ಮುಚ್ಚಿ ಕುಳಿತಿದ್ದಾರೆ.
ದೀಪಾವಳಿಗೆಂದು ಅಂಗಡಿಗಳಿಗೆ ಹೋಲ್ಸೇಲ್ ಪಟಾಕಿ ತಂದಿಟ್ಟವರು ತಮ್ಮ ಪಟಾಕಿ ಪ್ಯಾಕೆಟ್ಟುಗಳನ್ನು ಬೆಚ್ಚಗಿನ ಜಾಗದಲ್ಲಿ ಜೋಪಾನವಾಗಿಡುತ್ತಿದ್ದಾರೆ. ಈ ಸೈಕ್ಲೋನ್ ರಾಗದ ಮಳೆ ಎಷ್ಟು ದಿನ ಇರುತ್ತದೆಯೋ ಯಾರಿಗೆ ಗೊತ್ತು ? ದೀಪಾವಳಿ ಆಫರ್ ನೀಡುತ್ತಿರುವ ಜವಳಿ ಅಂಗಡಿಯವರು ಹೊಸ ಮಾದರಿಯ ಸೀರೆ, ಚೂಡಿದಾರ್ಗಳನ್ನು ತಮ್ಮ ಮಳಿಗೆಯ ವೆರಾಂಡದಲ್ಲಿ ತೂಗು ಹಾಕುವಂತಿಲ್ಲ. ಸೈಕ್ಲೋನ್ ಮಳೆಯದೊಂದು ಕಿರಿಕಿರಿ.