ಭಾನುವಾರ ಆಸ್ಪತ್ರೆಯಿಂದ ವಾಜಪೇಯಿ ಡಿಸ್ಚಾರ್ಜ್
ಮುಂಬೈ : ಎರಡು ವಾರಗಳ ಹಿಂದೆ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಮಂಡಿಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾನುವಾರ 11 ಗಂಟೆಗೆ ಅಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ.
ವಾಜಪೇಯಿ ಅವರು ಆಸ್ಪತ್ರೆಯಿಂದ ಹೊರಟು ಸಾಂತಾಕ್ರೂಸ್ ವಿಮಾನನಿಲ್ದಾಣದಿಂದ ನೇರವಾಗಿ ದೆಹಲಿ ತಲುಪಲಿದ್ದಾರೆ. ಮುಂಬೈನಲ್ಲಿ ರಾಜ್ಯಪಾಲರ ವಸತಿ ಗೃಹ ರಾಜಭವನದಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿದ್ದರೂ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲೇ ತಂಗಲು ನಿರ್ಧರಿಸಿದ್ದ ಪ್ರಧಾನಿ, ಬರುವ ಗುರುವಾರದ ದೀಪಾವಳಿ ಹೊತ್ತಿಗೆ ದೆಹಲಿಗೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದರು.
ವಾಜಪೇಯಿ ಅವರಿಗೆ ನಗರದಿಂದ ವಿದಾಯ ಹೇಳಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿಯವರನ್ನು ಹೊತ್ತುಯ್ಯುವ ಕಾರು ಚಲಿಸುವ ಮಾರ್ಗದುದ್ದಕ್ಕೂ ನಿಂತು ವಿದಾಯ ಹೇಳಲಿದ್ದಾರೆ. ಆಸ್ಪತ್ರೆಯಿಂದ ಒಂದು ಕಿಲೋಮೀಟರ್ ಉದ್ದದ ವಿಶೇಷ ಬ್ಯಾನರ್ ಅನ್ನು ಬಿಜೆಪಿ ಕಾರ್ಯಕರ್ತರು ಕಟ್ಟಿದ್ದಾರೆ.
ಬ್ಯಾನರ್ಗೆ ಚಿತ್ರನಟಿ ಜ್ಯೂಹಿ ಚಾವ್ಲಾ ಸೇರಿದಂತೆ ಅನೇಕ ನಟನಟಿಯರು ಮತ್ತು ಶಾಲಾಮಕ್ಕಳು ಸಹಿ ಹಾಕಿದ್ದಾರೆ.
ವಾಕರ್ ಸಹಾಯದಿಂದ ವಾಜಪೇಯಿ ಅವರು ಓಡಾಡುತ್ತಿದ್ದು, ದೆಹಲಿಯ ತಮ್ಮ ಮನೆಯಲ್ಲೂ ಫಿಜಿಯೋಥೆರಪಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಿಜೆಪಿ ಕಛೇರಿ ಮೂಲಗಳು ತಿಳಿಸಿವೆ. ವಾಜಪೇಯಿ ಅವರ ಶಸ್ತ್ರಚಿಕಿತ್ಸೆ ಗಾಯ ವಾಸಿಯಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.