ವಿಶ್ವ ವಿದ್ಯಾಲಯಗಳ ರಚನೆಯಲ್ಲಿ ಪರಿವರ್ತನೆ - ಸಚಿವ ಪರಮೇಶ್ವರ್
ಮಂಗಳೂರು : ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯಗಳ ರಚನೆಯನ್ನು ಪರಿವರ್ತಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಅವರು ಸೋಮವಾರ, ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ಎಂಎಸ್ಸಿ ಯಲ್ಲಿ ಇನ್-ಫರ್ಮೇಷನ್ ಸಿಸ್ಟಮ್ಸ್ ಮತ್ತು ಮೆರಾೖನ್ ಜಿಯಾಲಜಿ ವಿಭಾಗದಿಂದ ಎಂ. ಎಸ್. ಪದವಿಯಲ್ಲಿ ಜಿಯೋ ಇ-ನ್-ಫರ್ಮಾಟಿಕ್ಸ್ ಎಂಬ ಎರಡು ಹೊಸ ವಿಷಯಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಪದವಿ ತರಗತಿಗಳಲ್ಲಿಯೂ ಕಂಪ್ಯೂಟರ್ ಕಲಿಕೆಯನ್ನು ಐಚ್ಛಿಕ ವಿಷಯವನ್ನಾಗಿ ಅಳವಡಿಸಿಕೊಳ್ಳಲಾಗುವುದು. 2008ನೇ ಇಸವಿಯ ವೇಳೆಗೆ 22.5 ಲಕ್ಷ ಕಂಪ್ಯೂಟರ್ ಸಾಫ್ಟ್ವೇರ್ ಇಂಜಿನಿಯರ್ಗಳ ಅವಶ್ಯಕತೆ ಇದೆ. ದೇಶದಲ್ಲಿರುವ ಎಲ್ಲಾ ವಿವಿಗಳೂ ಸೇರಿ ವಾರ್ಷಿಕ 75 ಸಾವಿರ ಪದವೀಧರರನ್ನು ಮಾತ್ರ ಉತ್ಪಾದಿಸುತ್ತವೆ. ಈ ಕೊರತೆಯನ್ನು ತುಂಬಲು ಮಾಹಿತಿ ತಂತ್ರಜ್ಞಾನದ ಸೀಟುಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಭಾರತೀಯ ಕಂಪ್ಯೂಟರ್ ತಜ್ಞರಿಗೆ ಅಮೆರಿಕಾದಲ್ಲಿ ಗೌರವವಿದೆ. ಫ್ರಾನ್ಸ್ , ಜಪಾನ್ ಮತ್ತು ಜರ್ಮನಿಗಳೂ ತಂತ್ರ ಜ್ಞಾನದಲ್ಲಿ ಮುಂದುವರೆದಿದ್ದರೂ ಭಾಷೆ ಅವರಿಗೆ ತೊಡಕಾಗಿದೆ ಎಂದು ಪರಮೇಶ್ವರ್ ಹೇಳಿದರು.
(ಮಂಗಳೂರು ಪ್ರತಿನಿಧಿಯಿಂದ)