ರಾಜ್ಕುಮಾರ್ ಬಿಡುಗಡೆ ಆಗಿದೆ, ಇಂದು ರಾತ್ರಿ ಚೆನ್ನೈಗೆ?
ಬೆಂಗಳೂರು : ಸೋಮವಾರವೇ ಗುರುವಾರವಾಯ್ತು. 78 ದಿನಗಳ ವನವಾಸಾನಂತರ ರಾಜ್ಕುಮಾರ್ ಬಿಡುಗಡೆಯಾಯಿತು. ಸೋಮವಾರ ಬೆಳಗ್ಗೆ 9.45ರ ಸುಮಾರಿನಲ್ಲಿ ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಗೊಳಿಸಿದ್ದು, ಪಳ ನೆಡುಮಾರನ್ರೊಂದಿಗೆ ರಾಜ್ ಹಾಗೂ ಇತರ ಒತ್ತೆಯಾಳುಗಳು ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳಸಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯಾಬ್ಬರು ಹೇಳಿದ್ದಾರೆ.
ರಾಜ್ ಬಿಡುಗಡೆಯ ಸುದ್ದಿ ಅಧಿಕೃತವಾಗಿ ಹೊರಬಿದ್ದರೆ, ಕರ್ನಾಟಕದಲ್ಲಿ ವಾಸಮಾಡುತ್ತಿರುವ ತಮಿಳರಿಗೆ ಅಪಾಯ ಆಗಬಹುದೆಂಬ ಕಾರಣದಿಂದ ಹಾಗೂ ರಾಜ್ ಅಭಿಮಾನಿಗಳ ಉತ್ಸಾಹದ ಆಚರಣೆಯ ಸಂಭ್ರಮವನ್ನು ನಿಯಂತ್ರಿಸಲು ಪೊಲೀಸರು ಸಜ್ಜಾಗಬೇಕಾಗಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಆದರೆ, ರಾಜ್ಕುಮಾರ್ ಅವರು ಬಿಡುಗಡೆಯಾಗಿರುವ ವಿಷಯವನ್ನು ಅಧಿಕೃತವಾಗಿ ಎರಡೂ ಸರಕಾರಗಳೂ ದೃಢಪಡಿಸಿಲ್ಲ. ಮೂಲಗಳ ಹೇಳಿಕೆಯ ರೀತ್ಯ ಡಾ.ರಾಜ್ಕುಮಾರ್ ಹಾಗೂ ಅವರ ಸಂಬಂಧಿಕರಾದ ಗೋವಿಂದರಾಜ್ ಹಾಗೂ ನಾಗೇಶ್ ಅವರನ್ನು ಕರೆದುಕೊಂಡು ನಾಡಿನತ್ತ ಹೊರಟಿರುವ ಪಳನೆಡುಮಾರನ್, ಕಲ್ಯಾಣಿ ನೇತೃತ್ವದ ತಂಡ ಸೋಮವಾರ ಸಂಜೆ 7 ಗಂಟೆಯ ಹೊತ್ತಿಗೆ ತಮಿಳುನಾಡು ಗಡಿಯ ಈರೋಡ್ ಜಿಲ್ಲೆಯ ತೆನ್ನು ಮುರುಡು ಕಾನನದ ಮೂಲಕ ನಾಡಿಗೆ ಅಡಿ ಇಡುತ್ತದೆ ಎಂದೂ ಗೊತ್ತಾಗಿದೆ.
ಕಾಡಿನ ಕೊನೆಗೆ ಆಗಮಿಸುವ ಸುಸಜ್ಜಿತ ಆ್ಯಂಬುಲೆನ್ಸ್ನಲ್ಲಿ ರಾಜ್ಕುಮಾರ್ ಹಾಗೂ ಇತರರು ಚೆನ್ನೈಗೆ ಸೋಮವಾರ ರಾತ್ರಿ ತಲುಪುತ್ತಾರೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಸೋಮವಾರ ರಾತ್ರಿ ಇಲ್ಲವೇ ಮಂಗಳವಾರ ಬೆಳಗ್ಗೆ ರಾಜ್ಕುಮಾರ್ ಅವರು ಕರುಣಾನಿಧಿ ಅವರೊಂದಿಗೆ ಮಾಧ್ಯಮಗಳ ಕ್ಯಾಮಾರಾ ಮುಂದೆ ಬರಲಿದ್ದಾರೆ. ಅವರು, ಶಾಂತಿ ಕಾಪಾಡುವಂತೆ ಕನ್ನಡಿಗರಿಗೆ ಮನವಿ ಮಾಡಿದ ನಂತರ ಮಂಗಳವಾರ ಸಂಜೆ ಅವರನ್ನು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್ನಲ್ಲಿ ಕಳುಹಿಸಿಕೊಡುತ್ತಾರೆ ಎಂದೂ ಅವರು ಹೇಳಿದ್ದಾರೆ.
ಕ್ಷಣದಲ್ಲಿ ಹಬ್ಬಿದ ಸುದ್ದಿ : ರಾಜ್ ಬಿಡುಗಡೆಯಾಗಿದ್ದಾರೆ ಎನ್ನುವ ಸುದ್ದಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ 4 ಗಂಟೆಗೆ ಎಲ್ಲೆಡೆ ಹಬ್ಬಿತ್ತು. ಈ ಸುದ್ದಿ ಊರೆಲ್ಲಾ ಕ್ಷಣ ಮಾತ್ರದಲ್ಲಿ ಸುತ್ತಾಡಿ ಬಂತು. ಬಿಡುಗಡೆ ಸುದ್ದಿ ನಿಜವೋ ಸುಳ್ಳು ಎಂದು ಖಚಿತ ಪಡಿಸಿಕೊಳ್ಳಲು ಮಾಧ್ಯಮದ ಕಚೇರಿಗಳಿಗೆ ಅಸಂಖ್ಯಾತ ದೂರವಾಣಿ ಕರೆಗಳು ಬಂದವು. ಮೊಬೈಲ್ ಫೋನ್ಗಳಲ್ಲೂ ಈ ಸುದ್ದಿ ನಗರವನ್ನೆಲ್ಲಾ ಸುತ್ತಿ ಬಂದಿದೆ.
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ