ನವೆಂಬರ್ನಲ್ಲಿ ವರ್ಷ ತುಂಬಿದ ಕೃಷ್ಣ ಸಚಿವ ಸಂಪುಟ ಪುನಾರಚನೆ ?ಕೆಲವು ಕಿರಿಯ ಸಚಿವರಿಗೆ ಖೋಕ್, ಹೊಸ ಮುಖಗಳ ನಿರೀಕ್ಷೆ
ಬೆಂಗಳೂರು : ಈ ತಿಂಗಳ 23ರಿಂದ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಆರಂಭ. ಈ ಅಧಿವೇಶಾನಂತರ ವರ್ಷ ತುಂಬಿದ ತಮ್ಮ ಸಚಿವ ಸಂಪುಟವನ್ನು ಪುನಾರಚಿಸುವ ಬಗ್ಗೆ ಹಾಗೂ ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವ ಬಗ್ಗೆ ಮುಖ್ಯಮಂತ್ರಿ ಕೃಷ್ಣ ಚಿಂತಿಸಿದ್ದಾರೆ.
ಈ ಬಗ್ಗೆ ತಮ್ಮ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳ ಜತೆ ಕೃಷ್ಣ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ. ಆದರೆ, ಸಚಿವ ಸಂಪುಟದ ಪುನಾರಚನೆಯ ನಿರ್ದಿಷ್ಟ ದಿನ ಯಾವುದೆಂದು ತಿಳಿದುಬಂದಿಲ್ಲ. ಬಹುತೇಕ ನವೆಂಬರ್ ತಿಂಗಳಿನಲ್ಲಿ ಸಂಪುಟಕ್ಕೆ ಹೊಸ ಮುಖಗಳು ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಎಂ.ಆರ್. ಸೀತಾರಾಮ್ ಅವರ ಹೆಸರೂ ಕೇಳಿಬರುತ್ತಿದೆ.
ಕೃಷ್ಣ ಅವರು ಈ ಹಿಂದೆ ತಿಳಿಸಿದ್ದಂತೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಮೌಲ್ಯ ಮಾಪನದಲ್ಲಿ ತೊಡಗಿದ್ದಾರೆ. ಎಲ್ಲ ಇಲಾಖೆಗಳ ಕಾರ್ಯವೈಖರಿಯ ಬಗ್ಗೆಯೂ ಪರಿಶೀಲನೆ ನಡೆಸುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿಗಳು ಆರಂಭಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ವಲಯದಿಂದ ತಿಳಿದುಬಂದಿದೆ.
ಒಂದು ವರ್ಷದ ಅವಧಿಯಲ್ಲಿ ಯಾವುದೇ ಬಹಿರಂಗ ಭಿನ್ನಮತವನ್ನು ಎದುರಿಸದ ಮುಖ್ಯಮಂತ್ರಿಗಳು, ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಉದ್ಭವಿಸಬಹುದಾದ ಅಸಮಾಧಾನಗಳ ಬಗ್ಗೆಯೂ ಪೂರ್ವಾಲೋಚನೆ ಮಾಡಿದ್ದಾರೆ. ಈ ಸಂಬಂಧ ಅಧಿವೇಶನದ ಬಳಿಕ ಎಲ್ಲ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸುವ ಯೋಚನೆ ಮುಖ್ಯಮಂತ್ರಿಗಳಿಗಿದೆಯಂತೆ.
ಅಧಿವೇಶನ ಪೂರ್ವದ ಶಾಸಕಾಂಗ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಮುಖ್ಯಮಂತ್ರಿಗಳ ಆಪ್ತರು ತಿಳಿಸಿದ್ದಾರೆ. ಸಚಿವ ಸಂಪುಟ ಪುನಾರಚನೆಯ ನಂತರ ಆಗಬಹುದಾದ ರಾಜಕೀಯ ಬೆಳವಣಗೆಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುವ ಬಗ್ಗೆ ಕೂಡ ಮುಖ್ಯಮಂತ್ರಿಗಳು ತಮ್ಮ ಆಪ್ತ ಸಲಹೆಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ.
ಎಲ್ಲ ವಿಷಯಗಳಲ್ಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದೇ ತಮ್ಮ ಯಶಸ್ಸಿನ ಗುಟ್ಟು ಎಂದು ಬುಧವಾರ ಪ್ರಕಟಿಸಿದ್ದ ಮುಖ್ಯಮಂತ್ರಿಗಳು ಈಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎಲ್ಲರ ಸಹಮತ ಪಡೆದು, ಅಲ್ಪ ಬದಲಾವಣೆಗಳೊಂದಿಗೆ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕೆಲವು ಕಿರಿಯ ಸಚಿವರುಗಳು ತಮ್ಮ ಖಾತೆಯನ್ನು ಕಳೆದುಕೊಳ್ಳುವ ಸಂಭವ ಇದೆ.