‘ ಜನತೆಯ ಜೀವನ ಮಟ್ಟ ಸುಧಾರಿಸುವುದೇ ನನ್ನ ಗುರಿ ’ - ಕೃಷ್ಣ
ಬೆಂಗಳೂರು :ಬೆಂಗಳೂರು ಏಷ್ಯಾ ಖಂಡದ ಜ್ಞಾನದ ರಾಜಧಾನಿ, ಇದನ್ನು ತಂತ್ರಜ್ಞಾನ ಹಾಗೂ ಬುದ್ಧಿಮತ್ತೆಯ ರಾಜಧಾನಿಯಾಗಿ ಪರಿವರ್ತಿಸುವುದು ಹಾಗೂ ನಾಡಿನ ಜನರ ಜೀವನದ ಮಟ್ಟವನ್ನು ಸುಧಾರಿಸುವುದು ತಮ್ಮ ಸರಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ.
‘ಜನತೆಯ ಅಖಂಡ ಆಶೀರ್ವಾದದಿಂದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂತು. ನಾವು ಗ್ರಾಮೀಣ ಜನರ ಬಗ್ಗೆ ಅಸಡ್ಡೆ ತೋರಿಲ್ಲ. ನೀರಾವರಿಗೆ ಆದ್ಯತೆ ನೀಡಿದ್ದೇವೆ, 2600 ಕೋಟಿ ರುಪಾಯಿ ವಾರ್ಷಿಕ ಅಂದಾಜಿನಲ್ಲಿ ಈಗಾಗಲೇ 1600 ಕೋಟಿ ರುಪಾಯಿ ಖರ್ಚು ಮಾಡಿದ್ದೇವೆ. ಗ್ರಾಮೀಣ ಜನರ ಉಪಯೋಗಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಜಲಸಂವರ್ಧನೆ ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನಿಂದ ರೂಪಿಸಲಾಗುತ್ತಿದೆ ’
ತಮ್ಮ ಸರಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಖಾಸಗಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಕೃಷ್ಣ ಅವರು ತಮ್ಮ ಆಡಳಿತದ ಒಂದು ವರ್ಷದ ಸಾಧನೆಯನ್ನು ಬಣ್ಣಿಸಿದ ಬಗೆ ಇದು.
ವಸತಿ ಹಾಗೂ ಮೂಲ ಭೂತ ಸೌಕರ್ಯಗಳು ಎಲ್ಲರಿಗೂ ಅಗತ್ಯ, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ತಮ್ಮ ಸರಕಾರ ಅಧಿಕಾರವಹಿಸಿಕೊಂಡ ದಿನದಿಂದಲೇ ರಸ್ತೆಗಳ ದುರಸ್ತಿಗೆ ಗಮನ ಹರಿಸಿದೆ. ಪ್ರತಿವರ್ಷ ಎರಡು ಲಕ್ಷ ಮನೆ ನಿರ್ಮಿಸಿಕೊಡವ ಯೋಜನೆ ಹಾಕಿಕೊಂಡಿದ್ದೇವೆ. ಸಂಪನ್ಮೂಲದ ಕ್ರೋಡೀಕರಣವೂ ಆಗಿದೆ. ಯಾವ ಸರಕಾರವೂ ಈ ವರೆಗೆ ವಸತಿಗೆ 60 ಕೋಟಿ ರು. ಬಿಡುಗಡೆ ಮಾಡಿದ ಇತಿಹಾಸ ಇಲ್ಲ, ಆ ಸಾಧನೆಯನ್ನು ತಮ್ಮ ಸರಕಾರ ಮಾಡಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ವಿದೇಶೀ ಬಂಡವಾಳ : ನಿರುದ್ಯೋಗ ಇಂದಿನ ಯುವಕರನ್ನು ಕಾಡುತ್ತಿದೆ. ಹೀಗಾಗಿ ಜಾಗತಿಕ ಬಂಡವಾಳ ಹೂಡಿಕೆ ದಾರರ ಸಮಾವೇಶ ನಡೆಸಿದೆವು. ನಮ್ಮ ನಿರೀಕ್ಷೆಗೂ ಮೀರಿ 27 ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡಲು ಕಂಪನಿಗಳು ರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಲಿದೆ ಎಂದು ಹೇಳಿದರು.
ಮೂರು ಚುನಾವಣೆಯಿಂದ ಪ್ರಗತಿ ಕುಂಠಿತ : ತಮ್ಮ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ತರುವಾಯ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕಾಗವಾಡ ಉಪಚುನಾವಣೆ ಸೇರಿದಂತೆ ಮೂರು ಚುನಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗಬಾರದೆಂದು ಹೊಸ ಯೋಜನೆ, ಕಾರ್ಯಕ್ರಮ ಪ್ರಕಟಿಸಲಾಗಲಿಲ್ಲ. ಹೀಗಾಗಿ ನಾಲ್ಕಾರು ತಿಂಗಳು ಪ್ರಗತಿ ಕುಂಠಿತವಾಗಿದೆ. ಮಿಗಿಲಾಗಿ ಅನಿರೀಕ್ಷಿತವಾಗಿ ಬರುವ ಕೆಲವು ಸಂಕಷ್ಟಗಳೂ ಪ್ರಗತಿಗೆ ಕಡಿವಾಣ ಹಾಕಿದವು ಎಂದರು.
1 ಮುಖಪುಟ / ಇವತ್ತು... ಈ ಹೊತ್ತು...