ವಾಜಪೇಯಿ ಶಸ್ತ್ರಚಿಕಿತ್ಸೆಗೆ ಸುಸಜ್ಜಿತಗೊಂಡ ಆಸ್ಪತ್ರೆವ್ಯಾಪಕ ಪರೀಕ್ಷೆಗಳಿಗೆ ಒಳಗಾಗಲಿರುವ ಪ್ರಧಾನಿ
ಮುಂಬೈ: ಪ್ರಧಾನಿ ವಾಜಪೇಯಿ ಅವರು ಶಸ್ತ್ರಚಿಕಿತ್ಸೆ ಕಾಲಕ್ಕೆ ಪೂರ್ವಭಾವಿಯಾಗಿ ಒಳಗಾಗಬೇಕಿರುವ ಪರೀಕ್ಷೆಗಳಿಗಾಗಿ ಸೋಮವಾರ ಸಂಜೆ ಇಲ್ಲಿನ ಪ್ರಸಿದ್ಧ ಬ್ರೀಚ್ಕ್ಯಾಂಡಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಮಂಗಳವಾರದಿಂದ ಪ್ರಧಾನಿ ಅವರನ್ನು ವಿವಿಧ ರೀತಿಯ ಪರೀಕ್ಷೆಗೊಳಪಡಿಸಲಾಗುವುದು. ಇವುಗಳಲ್ಲಿ ಬಿಳಿರಕ್ತಕಣಗಳ ಸಂಖ್ಯೆ, ಸಕ್ಕರೆ ಖಾಯಿಲೆ, ಎಚ್ಐವಿ ಹಾಗೂ ಇತರ ಯಾವುದೇ ರೀತಿಯ ಸೋಂಕುಗಳ ಪರೀಕ್ಷೆ ನಡೆಯಲಿದೆ. ನಂತರ ಎದೆ ಮತ್ತು ಮೊಣಕಾಲಿನ ಎಕ್ಸ್ರೇ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆಗಳಿಗೂ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶಸ್ತ್ರ ಚಿಕಿತ್ಸೆ ಸಂಬಂಧ ಕಳೆದ ಭಾನುವಾರದಿಂದಲೇ ಪ್ರಧಾನಿಯವರ ಆಹಾರ ಕ್ರಮ ಬದಲಾಗಿದೆ. ಆಸ್ಪತ್ರೆಗೆ ಬಂದೊಡನೆ ಅವರ ವೇಷಭೂಷಣಗಳೂ ಬದಲಾಗಲಿವೆ. ದೋತಿ-ಕುರ್ತಾದ ಬದಲಿಗೆ ವಾಜಪೇಯಿ ಅವರು ಆಸ್ಪತ್ರೆಯಲ್ಲಿ ಒದಗಿಸಲಾಗುವ ಗೌನನ್ನು ತೊಡಬೇಕಾಗುವುದು.
ವೇಳೆ ನಿರ್ಧಾರವಾಗಿಲ್ಲ : ಓಸ್ಟಿಯೋ ಆರ್ಥರೈಟಿಸ್ ಎಂದು ಕರೆಯುವ ಮೊಣಕಾಲಿಗೆ ಸಂಬಂಧಿಸಿದ ಭಾದೆಯಿಂದ 75 ವರ್ಷ ವಯಸ್ಸಿನ ವಾಜಪೇಯಿ ನರಳುತ್ತಿದ್ದಾರೆ. ವಾಜಪೇಯಿ ಅವರನ್ನು ಒಳಪಡಿಸಬೇಕಾದ ಎಲ್ಲ ಪರೀಕ್ಷೆಗಳು ಮಂಗಳವಾರ ಬೆಳಗಿನ ಹೊತ್ತಿಗೆ ಮುಗಿಯಲಿವೆ. ನಂತರ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ 7ನೇ ಮಹಡಿಯಲ್ಲಿ ವಾಜಪೇಯಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಶಸ್ತ್ರಚಿಕಿತ್ಸೆ ವೇಳೆಯನ್ನು ಇನ್ನೂ ನಿರ್ಧರಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಡೆದ 48ಗಂಟೆಗಳ ಕಾಲ ನೋವು ಕಾಣಿಸಿಕೊಳ್ಳದಂತೆ ವಿವಿಧ ರೀತಿಯ ನೋವು ನಿವಾರಕಗಳನ್ನು ನೀಡಲು ನಿರ್ಧರಿಸಲಾಗಿದೆ. ವಯಸ್ಕರಲ್ಲಿ ಸಹಜವಾಗಿ ಕಂಡುಬರುವ ಮೊಣಕಾಲು ನೋವಿನ ಈ ರೋಗದಿಂದ ರೋಗಿಗೆ ಓಡಾಡುವಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮೊಣಕಾಲಿನ ಮೂಳೆಗಳ ನಡುವಿನ ಕಾರ್ಟಿಲೇಜ್(ಮೃದ್ವಸ್ಥಿ)ಯನ್ನು ತೆಗೆದುಹಾಕಿ ಇಡೀ ಮೊಣಕಾಲಿನ ಭಾಗಕ್ಕೆ ಕೃತಕ ಅಂಗವನ್ನು ಜೋಡಿಸಲು ಉದ್ದೇಶಿಸಲಾಗಿದೆ. ಮೂರು ಭಾಗಗಳಿರುವ ಈ ಕೃತಕ ಅಂಗವನ್ನು ಕ್ರೋಮಿಯಮ್-ಕೋಬಾಲ್ಟ್ ಮಿಶ್ರಣ ಹಾಗೂ ಪಾಲಿಥೀನ್ಗಳಿಂದ ತಯಾರಿಸಲಾಗಿದೆ.
ವಿಶ್ರಾಂತಿ : ಈ ಅಂಗ ಜೋಡಿಸಲು ಸಿಮೆಂಟ್ ಮೂಳೆ ಉಪಯೋಗಿಸಲಾಗುವುದು. ಮೊಣಕಾಲಿನ ಮೇಲ್ಬಾಗದಿಂದ ಕೆಳಭಾಗಕ್ಕೆ ರಕ್ತ ಸರಬರಾಜು ಮಾಡಲು ಟ್ಯೂಬ್ ಒಂದನ್ನೂ ಜೋಡಿಸಲಾಗುವುದು. ಚಿಕಿತ್ಸೆ ನಂತರ ಕನಿಷ್ಠ 4 ದಿನ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ನಂತರ ಮೂರು ವಾರ, ನಡೆದಾಡಲು ಇರುವ ವಿಶೇಷ ವಾಕರ್ ಉಪಕರಣ ಉಪಯೋಗಿಸಬೇಕು ಆಮೇಲೆ ವಾಕಿಂಗ್ ಸ್ಟಿಕ್ ಬಳಸಬಹುದು ಎಂದು ವೈದ್ಯರು ವಿವರಿಸಿದ್ದಾರೆ.
ಬರುವ ತಿಂಗಳು ಫಿಜಿಯೋಥೆರಪಿ ಪರೀಕ್ಷೆಗೆ ಒಳಗಾಗಲಿರುವ ವಾಜಪೇಯಿ ಮುಂದಿನ ಮೂರು ತಿಂಗಳ ಹೊತ್ತಿಗೆ ಮಾಮೂಲಿಯಾಗಿ ಓಡಾಡಬಹುದು.
ಪ್ರಧಾನಿ ಅವರ ಹಿರಿಯ ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ಹಾಜರಿದ್ದು , ಮುತುವರ್ಜಿ ವಹಿಸಲಿದ್ದಾರೆ. ಅವರ ಆರೋಗ್ಯದ ಬಗ್ಗೆ ಕ್ಷಣಕ್ಷಣದ ಸಂಪೂರ್ಣ ಮಾಹಿತಿ ನೀಡಲು ಏಳನೇ ಮಹಡಿಯಲ್ಲಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.