ಹೈಕೋರ್ಟ್ ಪೀಠ : ಪಟ್ಟು ಬಿಡದ ಬೆಳಗಾವಿ ವಕೀಲರುಧರ್ಮಸಂಕಟದ ಸುಳಿಯಲ್ಲಿ ರಾಜ್ಯ ಸರಕಾರ
ಬೆಳಗಾವಿ : ಬೆಳಗಾವಿಗೇ ಹೈಕೋರ್ಟ್ ಪೀಠ ಬೇಕೆಂಬ ಬೇಡಿಕೆಯಿಂದ ಹಿಂದೆ ಸರಿಯಲು ಸ್ಥಳೀಯ ವಕೀಲರು ನಿರ್ಧರಿಸಿರುವುದರಿಂದ ಬಹು ದಿನಗಳ ಉತ್ತರ ಕರ್ನಾಟಕ ಹೈಕೋರ್ಟ್ ಪೀಠದ ವಿವಾದಕ್ಕೆ ಹೊಸ ತಿರುವು ಬಂದಿದೆ.
ನ್ಯಾಯಮೂರ್ತಿ ಅಶೋಕ್ಭಾನ್ ವರದಿ ಮತ್ತು ಸುಪ್ರೀಂಕೋರ್ಟ್ ತೀರ್ಪಿನಿಂದ ಪೀಠ ಸ್ಥಾಪನೆ ಸಂಬಂಧ ಹಿನ್ನಡೆ ಅನುಭವಿಸಿರುವ ಸರಕಾರ, ಪರಿಹಾರಗಳನ್ನು ಯೋಚಿಸುತ್ತಿರುವಾಗಲೇ ಬೆಳಗಾವಿಗೇ ಪ್ರತ್ಯೇಕ ಪೀಠ ಬೇಕೆಂಬ ಕೂಗು ಪ್ರಬಲವಾಗುತ್ತಿರುವುದು ಸರಕಾರದ ಧರ್ಮಸಂಕಟವನ್ನು ಹೆಚ್ಚಿಸಿದೆ.
ಸ್ವಾತಂತ್ರಪೂರ್ವದಿಂದಲೂ ಪ್ರಮುಖ ಕೇಂದ್ರವಾಗಿದ್ದ ಬೆಳಗಾವಿ, ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ನಂತರ ಕರ್ನಾಟಕದ ಭಾಗವಾಗಿದ್ದು , ಹೈಕೋರ್ಟ್ ಪೀಠಕ್ಕೆ ಸೂಕ್ತ ಸ್ಥಳವಾಗಿದೆ ಎಂದು ವಾದಿಸುತ್ತಿರುವ ಬೆಳಗಾವಿ ವಕೀಲರು ಈ ಸಂಬಂಧ ಮುಖ್ಯಮಂತ್ರಿ ಕೃಷ್ಣ ಹಾಗೂ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಹೊಸ ಪ್ರಸ್ತಾವನೆ: ಈ ಮಧ್ಯೆ ನ್ಯಾಯಮೂರ್ತಿಗಳಾದ ಭಾಸ್ಕರರಾವ್ ಹಾಗೂ ಅಶೋಕ್ ಭಾನ್ ಸಮಿತಿ ವರದಿಗಳು ಹೈಕೋರ್ಟ್ ಪೀಠದ ಸಂಬಂಧ ನಕಾರಾತ್ಮಕ ವರದಿ ಸಲ್ಲಿಸಿದ್ದವು. ಇತ್ತೀಚೆಗೆ ಸಲ್ಲಿಸಲಾದ ಅಶೋಕ್ಭಾನ್ ಸಮಿತಿ ವರದಿ ನಂತರವೂ ಪೀಠ ಸ್ಥಾಪನೆಯ ತನ್ನ ಪ್ರಯತ್ನ ಮುಂದುವರಿಸಿರುವ ಸರಕಾರ, ಸಧ್ಯದಲ್ಲೇ ಅಧಿಕಾರ ಸ್ವೀಕರಿಸಲಿರುವ ನೂತನ ನ್ಯಾಯಮೂರ್ತಿಗಳಿಗೆ ಹೊಸ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
ಭಾನ್ ವರದಿ ಬಹಿರಂಗವಾದ ನಂತರ ಚಳುವಳಿ, ಕೋರ್ಟ್ ಬಹಿಷ್ಕಾರ ಮುಂದುವರಿಸಿದ ಹುಬ್ಬಳ್ಳಿ ವಕೀಲರ ಒತ್ತಡಕ್ಕೆ ಮಣಿದು, ನವೆಂಬರ್ ಒಂದರಿಂದ ಹುಬ್ಬಳ್ಳಿಯಲ್ಲಿ ಸರ್ಕೀಟ್ ಪೀಠ ಸ್ಥಾಪಿಸಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿತ್ತು. ಕಾಯಂ ಪೀಠ ಸ್ಥಾಪನೆಗೆ ಸರಕಾರ ಪ್ರಯತ್ನ ಮುಂದುವರಿಸಲಿದ್ದು ಅಲ್ಲಿಯವರೆಗೆ ಸರ್ಕೀಟ್ಪೀಠ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ನಡುವೆ ಬೆಳಗಾವಿ ವಕೀಲರು ಪಟ್ಟನ್ನು ಬಿಗಿಗೊಳಿಸಿದ್ದಾರೆ. ಸರಕಾರ ಸಂದಿಗ್ದಕ್ಕೆ ಸಿಲುಕಿದೆ.
(ಇನ್ಫೋ ವರದಿ)