ರಾಜ್ಯದಲ್ಲಿ ಮಿದುಳು ಜ್ವರದ ಭೀತಿ
ಬಳ್ಳಾರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆದುಳು ಜ್ವರದ ಭೀತಿ ಕಾಣಿಸಿಕೊಂಡಿದೆ. ಕೋಲಾರ, ಮಂಡ್ಯ , ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ರೋಗ ಹರಡುತ್ತಿರುವ ಬಗ್ಗೆ ವರದಿಗಳು ಬಂದಿವೆ.
ತಲೆ ನೋವು, ತಲೆ ಸುತ್ತುವುದು, ವಾಂತಿ, ಜ್ವರ, ಉಬ್ಬುಸ, ಗಂಟಲುನೋವು ಬರುವುದು ರೋಗದ ಲಕ್ಷಣವಾಗಿದ್ದು, ತಕ್ಷಣ ತೋರಿಸಿಕೊಳ್ಳದಿದ್ದರೆ ಸಾವೇ ಅಂತಿಮವಾಗಿ ಅಪ್ಪುತ್ತದೆ. ರೋಗಿಗಳಲ್ಲಿ ಕೆಲವರು ಗುಣಮುಖರಾದರೆ ಇನ್ನೂ ಕೆಲವರು ಬುದ್ದಿಮಾಂದ್ಯರಾಗುತ್ತಾರೆ.
ದೇಶವಿದೇಶ ಹಾಗೂ ಬೇರೆ ರಾಜ್ಯಗಳಿಂದ ವಲಸೆ ಬರುವ ಕೊಕ್ಕರೆಗಳು ಮೆದುಳುಜ್ವರಕ್ಕೆ ಕಾರಣವಾಗುವ ವೈರಸ್ಗಳನ್ನು ಹೊತ್ತು ತರುತ್ತವೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಮಳೆಗಾಲದ ಈ ಕೊಕ್ಕರೆಗಳು ವಲಸೆ ಬರುವುದರಿಂದ ಜೂನ್ನಿಂದ ಡಿಸೆಂಬರ್ವರೆಗೆ ರೋಗದ ಹಾವಳಿ ಹೆಚ್ಚು.
ಮುನ್ನೆಚ್ಚರಿಕೆ: ಕ್ಯೂಲೆಕ್ಸ್ ವಿಶ್ಣುವಿ ಎಂಬ ಸೊಳ್ಳೆಯು ವೈರಸ್ ಹೊಂದಿದ ಕೊಕ್ಕರೆ, ಹಂದಿ, ದನ ಕರುಗಳನ್ನು ಕಚ್ಚಿ ಮನುಷ್ಯರನ್ನು ಕಚ್ಚುವುದರಿಂದ ರೋಗ ಹರಡುತ್ತದೆ. ಹಂದಿಗಳನ್ನು ಜನವಸತಿಯಿಂದ ದೂರವಿರಿಸುವುದು, ಸೊಳ್ಳೆನಾಶಕಗಳನ್ನು ಸಿಂಪಡಿಸುವುದರಿಂದ ರೋಗದ ಹರಡುವಿಕೆಯನ್ನು ತಪ್ಪಿಸಬಹುದು.
(ಇನ್ಫೋ ವರದಿ)