ಪೊಲೀಸರಿಗೆ ಬೈದ ಮಾವುತ, ಬಲರಾಮನಿಗೆ ಭಲಾ ಎಂದ
ಮೈಸೂರು :ಮೂರನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದಂಬಾರಿಯ ಹೊತ್ತು ಸೊಗಸಾಗಿ ಹಾಗೂ ಶಿಸ್ತಿನಿಂದ ಕಾರ್ಯ ನಿರ್ವಹಿಸಿದ ಬಲರಾಮನಿಗೆ ಶಹಬಾಸ್ ಹೇಳಿದ ಮಾವುತ, ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಘಟನೆ ಭಾನುವಾರ ನಡೆಯಿತು.
ದಸರಾ ಮೆರವಣಿಗೆಯ ಸಮಯದಲ್ಲಿ ಅಂಬಾರಿಯನ್ನು ಹೊತ್ತು ಬಂದ ಬಲರಾಮ, ಆರಮನೆ ಆವರಣದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಂಬಾರಿಯ ಮೇಲಿದ್ದ ಚಾಮುಂಡಾಂಬಿಕೆಗೆ ಪುಷ್ಪಾರ್ಚನೆ ಮಾಡಲು ಏರಿದ್ದ ವೇದಿಕೆಯ ಬಳಿ ಬಂದು ಶಿಸ್ತಿನಿಂದ ನಿಂತು, ಸೊಂಡಿಲೆತ್ತಿ ಮುಖ್ಯಮಂತ್ರಿಗಳಿಗೆ ವಿಧೇಯತೆಯಿಂದ ನಮಸ್ಕರಿಸಿದಾಗ, ತನ್ನ ಆನೆಯ ಶಿಸ್ತು ಪಾಲನೆಯನ್ನು ಮೆಚ್ಚಿದ ಮಾವುತ ಆನೆಯ ಕಿವಿ ಸವರುತ್ತಾ, ಭಲಾ ಬಲರಾಮ, ಶಬಾಷ್ ಕಲ ಶಬಾಷ್ ಎಂದು ಉದ್ಗರಿಸಿದ.
ಮುಖ್ಯಮಂತ್ರಿಗಳು ಚಾಮುಂಡಾಂಬಿಕೆಯನ್ನು ಪೂಜಿಸುವಾಗ ಅವರ ರಕ್ಷಣೆಗೆ ಬಂದ ಪೊಲೀಸರ ಹಿಂಡು ಹಾಗೂ ಮುಖ್ಯಮಂತ್ರಿಗಳ ಹತ್ತಿರವೇ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಂಬಾರಿಯ ಹೊತ್ತ ಆನೆಗೆ ಮಿಸುಕಾಡಲೂ ಜಾಗ ಇಲ್ಲದಂತೆ ಆನೆಯ ಸುತ್ತಾ ಗುಂಪು ಕೂಡಿ ಕಸಿವಿಸಿ ಉಂಟು ಮಾಡಿದಾಗ, ಬಲರಾಮ ನಿಂತಲ್ಲೇ ಅಲುಗಾಡಿದ್ದರಿಂದ ಬೇಸತ್ತ ಮಾವುತ ಹೀಂಗಾದ್ರ ಹ್ಯಾಂಗ ಮಾಡೋದು, ಆನೆಗೂ ಕಾಲಿಡಲು ಸ್ವಲ್ಪ ಜಾಗ ಕೊಡಿ ಎಂದು ಕಿರುಚಿದ. ಪೊಲೀಸರ ಮೇಲೂ ಸಿಟ್ಟಿಗೆದ್ದ.
ಮಾವುತನ ಆರ್ಭಟಕ್ಕೆ ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕರು. ಆನಂತರ ತಪ್ಪಿನ ಅರಿವಾದ ಪೊಲೀಸರು ಜನರನ್ನು ದೂರಕಳಿಸಿ, ಬಲರಾಮನಿಗೆ ಅಡಿ ಇಡಲು ಅವಕಾಶ ಮಾಡಿಕೊಟ್ಟರು. ಪೂಜೆಯ ನಂತರ ಗಜ ಗಾಂಭೀರ್ಯದಿಂದ ಬಲರಾಮ ತನಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದ.