ಕೃಷ್ಣ ಸರ್ಕಾರದ ವಿರುದ್ಧ ಭಾರತೀಯ ಜನತಾಪಕ್ಷದ ಪ್ರತಿಭಟನೆ
ಗುಲ್ಬರ್ಗಾ : ಒಂದು ವರ್ಷ ಪೂರೈಸುತ್ತಿರುವ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ಕ್ರಿಯಾಶೂನ್ಯವಾಗಿದೆ ಎಂದು ಆರೋಪಿಸಿರುವ, ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ ಸೋಮವಾರದಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದೆ.
ರಾಜ್ಯದ 175 ತಾಲೂಕು ಕೇಂದ್ರಗಳು ಹಾಗೂ 27 ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಹೇಳಿದ್ದಾರೆ. ಮಂಗಳವಾರದಿಂದ 20ನೇ ತಾರೀಖಿನವರೆಗೆ ಪಕ್ಷದ ಕಾರ್ಯಕರ್ತರು ಕೇಂದ್ರ ಸರಕಾರದ ಸಾಧನೆ ಹಾಗೂ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ ಎಂದೂ ಹೇಳಿರುವ ಅವರು, ಈ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರುಗಳೂ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ ಅಪಹರಣಾನಂತರವಂತೂ ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಕಾರ್ಯ ಚಟುವಟಿಕೆಗಳೂ ಸ್ತಬ್ಧಗೊಂಡಿವೆ. ಶಾಸಕರುಗಳು ಕೇವಲ ಪ್ರಭಾವ ಬೀರಲು ಮಾತ್ರ ತಮ್ಮ ಸ್ಥಾನ ಬಳಸಿಕೊಳ್ಳುತ್ತಿದ್ದಾರೆ. ವರ್ಗಾವಣೆ ಮಾಡುವುದಿಲ್ಲ ಎಂದು ಹೇಳುವ ಸರಕಾರ ಪಶು ಸಂಗೋಪನೆ ಇಲಾಖೆ ಹಾಗೂ ಕೃಷಿ ಇಲಾಖೆಗಳಲ್ಲಿ ಶೇ. 75 ರಷ್ಟು ವರ್ಗಾವಣೆ ಮಾಡಿದೆ. ವರ್ಗಾವಣೆಯಲ್ಲಿ 6 ಕೋಟಿ ರುಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳೇ ಆರೋಪಿಸಿದ್ದಾರೆ ಎಂದೂ ಸೇಡಂ ಹೇಳಿದರು.