ಅಭಿವೃದ್ಧಿ ಮತ್ತು ರಾಜಕೀಯ !
ರಾಯಚೂರು :ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಅಡ್ಡಿಯಾಗಬಾರದು ಎಂಬುದು ಹಿತ ಚಿಂತಕರ ಅಂಬೋಣ. ಆದರೆ ಕೃಷ್ಣರ ಸರಕಾರ ಇದನ್ನು ಒಪ್ಪಿದಂತಿಲ್ಲ. ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ಕೇಂದ್ರದ ಏಳನೆಯ ಘಟಕ ನಿರ್ಮಾಣ ಕಾಮಗಾರಿ ಕಾಲ ಮಿತಿ ಪ್ರಕಾರ ಆರಂಭವಾಗಿದ್ದರೆ ಅರ್ಧದಷ್ಟು ಮುಗಿಯುತ್ತಿತ್ತು.
ಜೆ. ಹೆಚ್. ಪಟೇಲ್ ಸರಕಾರ 1999ರ ಏಪ್ರಿಲ್ನಲ್ಲಿ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಘಟಕದ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಿ ಜೀರೋ ಡೇಟ್ ಘೋಷಿಸಿದ್ದರು. ತಕ್ಷಣವೇ ಕೆಲಸ ಆರಂಭವಾಗಿದ್ದರೆ 640 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 28 ತಿಂಗಳೊಳಗೆ ಕೆಲಸ ಮುಗಿಯುತ್ತಿತ್ತು. ಪಟೇಲರ ನಂತರ ಕೃಷ್ಣ ಸರಕಾರ ಬಂದಂತೆಯೇ ಈ ಕೆಲಸವೂ ನೆನೆಗುದಿಗೆ ಬಿತ್ತು. ಘಟಕದ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನಿರ್ಮಾಣ ವೆಚ್ಚ 740 ಕೋಟಿ ರೂಪಾಯಿಗೇರಿದೆ. ಸೋನಿಯಾ ಗಾಂಧಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಬೇಕೆಂಬ ಇಚ್ಚೆಯಿಂದ ಸರಕಾರ 2 ಬಾರಿ ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದೆ. ಹಿಂದೆ ಜೆ. ಹೆಚ್. ಪಟೇಲರು ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆಯದೆಯೇ ಅಡಿಗಲ್ಲು ಹಾಕಿದ್ದರು. ಸೋನಿಯಾ ಗಾಂಧಿ 7ನೇ ಘಟಕಕ್ಕೆ ಅಡಿಗಲ್ಲು ಹಾಕುತ್ತಿಲ್ಲ. ಗುದ್ದಲಿ ಪೂಜೆ ನೆರವೇರಿಸುವರು ಎನ್ನುವುದು ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ಧರಂ ಸಿಂಗ್ ಅವರ ಸಮರ್ಥನೆ.
(ರಾಯಚೂರು ಪ್ರತಿನಿಧಿಯಿಂದ)