ವಿಕ್ರಮ ಸಂವತ್ಸರದಿ ಕ್ರಮತಪ್ಪಿದ ಮಳೆರಾಯ
ಬೆಂಗಳೂರು:ಸಾಮಾನ್ಯವಾಗಿ ದಸರೆಯ ವೈಭವಕ್ಕೆ ಅಡ್ಡಿಯಾಗದ ಮಳೆ ಈ ಬಾರಿ ಅದೇಕೋ ಅಡ್ಡಿ ಮಾಡಿದೆ. ವಿಕ್ರಮನಾಮ ಸಂವತ್ಸರದಲ್ಲಿ ಮಳೆರಾಯನೇಕೆ ಕ್ರಮ ತಪ್ಪಿದನೋ ತಿಳಿಯದು. ರಾಜ್ಯಾದ್ಯಂತ ಮಳೆರಾಯ ಅರ್ಭಟ ಮಾಡಿದ್ದಾನೆ.
ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಅತಿರೇಕವಾಗಿದೆ. ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಸಾಕಪ್ಪಾ ಸಾಕು ಎನ್ನುವಷ್ಟು ಮಳೆ ಸುರಿದಿದೆ. ಕಳೆದ ಐದಾರು ದಿನಗಳಿಂದ ಭಾರಿ ಆರ್ಭಟ ಮಾಡಿದ ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಂಚ ತಣ್ಣಗಾಗಿದೆ.
ಹೀಗಾಗಿ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ತೀರಪ್ರದೇಶದ ಕೆಲವೆಡೆ ಹಾಗೂ ಒಳನಾಡಿನ ಅನೇಕ ಕಡೆ ಮಳೆ ಬಿದ್ದಿದೆ. ಹೊನ್ನಾಳಿಯಲ್ಲಿ 4, ತರಿಕೆರೆಯಲ್ಲಿ 3, ಬಂಟ್ವಾಳ, ಖಾನಾಪುರ, ರಾಣೆಬೆನ್ನೂರುಗಳಲ್ಲಿ ತಲಾ 2, ಕಾರವಾರ, ಸಂಕೇಶ್ವರ, ಚಿತ್ರದುರ್ಗ, ಆಗುಂಬೆಗಳಲ್ಲಿ ತಲಾ 1 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಮಳೆಗೆ ಬಿಡುವು ದೊರೆತಿತ್ತು.
ಮಳೆ ಕಡಿಮೆಯಾದಂತೆ ಹವಾಮಾನದಲ್ಲೂ ಕೊಂಚ ಏರು ಪೇರಾಗಿದೆ. ಒಳನಾಡಿನ ಕೆಲವೆಡೆ ದಿನದ ಉಷ್ಣಾಂಶ ಏರಿತ್ತು. ಶುಕ್ರವಾರದ ಬೆಳಗ್ಗೆ ವರೆಗಿನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಹಲವೆಡೆ, ಒಳನಾಡಿನ ಕೆಲವು ಕಡೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿ ಮಳೆ ಬೀಳುವ ಸಾಧ್ಯತೆ ಇದೆ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಹಗುರದಿಂದ ಮಳೆ ಆಗುವ ನಿರೀಕ್ಷೆ ಇದೆ.