ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯ ಭಾಯಿಭಾಯಿಗಳ ಹೊಸ ಮಿಲನ

By Staff
|
Google Oneindia Kannada News

ನವದೆಹಲಿ : ಶೀತಲ ಸಮರದಲ್ಲಿ ಭಾಯಿಭಾಯಿಯಾಗಿದ್ದ ಭಾರತ ಹಾಗೂ ರಷ್ಯಾ ಮಂಗಳವಾರ ಕೆಲ ಒಡಂಬಡಿಕೆಗಳಿಗೆ ಸಹಿ ಹಾಕುವುದರೊಂದಿಗೆ ಹೊಸ ಶತಮಾನದಲ್ಲಿ ತಮ್ಮ ಸಂಬಂಧವನ್ನು ಉತ್ತಮಪಡಿಸಿಕೊಂಡವು. ಅಣುಶಕ್ತಿ ಮತ್ತು ಅಂತರರಾಷ್ಟ್ರೀಯ ಭಯೋತ್ಪಾದನೆ ತಡೆಗಟ್ಟುವ ನಿಟ್ಟಿನಲ್ಲಿ ಸಹಭಾಗಿತ್ವ ಘೋಷಿಸಿದವು. ರಕ್ಷಣೆಗೆ ಸಂಬಂಧಿಸಿದಂತೆ ಕೋಟ್ಯಂತರ ಡಾಲರ್‌ ಮೌಲ್ಯದ ಒಪ್ಪಂದ ಮಾಡಿಕೊಂಡವು.

ಕಳೆದ 8 ವರ್ಷಗಳಲ್ಲಿ ಭಾರತಕ್ಕೆ ಭೇಟಿ ಕೊಡುತ್ತಿರುವ ರಷ್ಯಾದ ಮೊದಲ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಭಾರತದ ಪ್ರಧಾನಿ ಎ.ಬಿ. ವಾಜಪೇಯಿ ಸಹಭಾಗಿತ್ವ ಘೋಷಣೆಗೆ ಮಂಗಳವಾರ ಸಹಿ ಹಾಕಿದರು. ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾಧ್ಯಮದವರೊಂದಿಗೆ ತಮ್ಮ ಒಡಂಬಡಿಕೆಯ ಸ್ವರೂಪವನ್ನು ಹಂಚಿಕೊಂಡರು.

ನಮ್ಮ ಸಹಭಾಗಿತ್ವ ಯಾವ ದೇಶದ ವಿರುದ್ಧವೂ ಅಲ್ಲ. ಒಡಂಬಡಿಕೆಯಿಂದ ಭಾರತ- ರಷ್ಯಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಉತ್ತಮಗೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ರಷ್ಯಾ ಕೂಡ ಬೆಂಬಲ ವ್ಯಕ್ತಪಡಿಸಿತ್ತು ಎಂದು ವಾಜಪೇಯಿ ಹೇಳಿದರು.

ಒಡಂಬಡಿಕೆಯ ಫಲಶೃತಿಗಳು ಇಂತಿವೆ :

  • ಎರಡೂ ದೇಶಗಳು ರಾಜಕೀಯವಾಗಿ ಪ್ರತಿ ವರ್ಷ ಸಮಿತಿ ಮಟ್ಟದಲ್ಲಿ ವಾರ್ಷಿಕ ಸಭೆ ನಡೆಸಲಿವೆ. ಉಭಯ ರಾಷ್ಟ್ರಗಳೂ ವಿಶ್ವಸಂಸ್ಥೆಯಲ್ಲಿ ಪರಸ್ಪರ ಸಹಕಾರ ನೀಡಲಿವೆ. ಮುಖ್ಯವಾದ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಸಂಬಂಧ ಜಂಟಿ ಕಾರ್ಯಾಚರಣೆ ಕೈಗೊಳ್ಳಲಿವೆ.
  • ಸಂಪೂರ್ಣ ನಿಶ್ಶಸ್ತ್ರೀಕರಣ ಮತ್ತು ಅಣ್ವಸ್ತ್ರಗಳ ನಿರ್ಮೂಲನೆಗೆ ಪ್ರಗತಿಶೀಲ ಕಾರ್ಯತಂತ್ರಗಳನ್ನು ರೂಪಿಸಲಿವೆ
  • ಪರಸ್ಪರ ಬಂಡವಾಳ ಹೂಡಿಕೆ ವೃದ್ಧಿ. ತೆರಿಗೆ ಇಳಿಕೆಗೆ ಯತ್ನ
  • ಉದ್ಯಮಿಗಳ ಪ್ರವಾಸಕ್ಕೆ ಅನುವಾಗಲು ನಿಯಮಗಳ ಸಡಿಲಿಕೆ
  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ದೀರ್ಘಕಾಲೀನ ಸಹಕಾರ ಯೋಜನೆ
  • ಕೃಷಿ ಕ್ಷೇತ್ರದಲ್ಲಿ ಅಂತರ ಸರ್ಕಾರೀ ಒಪ್ಪಂದ
  • ಭಾರತದ ಪೂರ್ವ ಕರಾವಳಿಯಲ್ಲಿನ ತೈಲ ಮತ್ತು ಅನಿಲ ಶೋಧನೆಯಲ್ಲಿ ಸಹಕಾರ
  • ಒರಟು ನೈಸರ್ಗಿಕ ವಜ್ರ ಸಂರಕ್ಷಣೆಯಲ್ಲಿ ಸಹಕಾರ
  • ಅಂಚೆ- ಸಂಪರ್ಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರಸ್ಪರ ಕಾನೂನು ಸಹಕಾರ
  • ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಹಕಾರ
  • ರಹಸ್ಯ ವಿಷಯಗಳ ಗೌಪ್ಯ ಕಾಪಿಡುವುದು
  • ಲೋಹಗಳು ಮತ್ತು ಖನಿಜ ವ್ಯಾಪಾರ ನಿಗಮ (ಎಂಎಂಟಿಸಿ) ಹಾಗೂ ರಷ್ಯಾದ ಗೋಖರಾನ್‌ ನಡುವೆ ಸಹಕಾರ
(ಐಎ-ಎ-ನ್‌-ಎ-ಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X