ರಾಜನ್ - ನಾಗೇಂದ್ರ ಜೋಡಿಯ ನಾಗೇಂದ್ರ ಆಸ್ಪತ್ರೆಯಲ್ಲಿ
ಬೆಂಗಳೂರು : ಕನ್ನಡ ಚಿತ್ರರಂಗದ ಹೆಸರಾಂತ ರಾಗ ಸಂಯೋಜಕ ಜೋಡಿ ರಾಜನ್ - ನಾಗೇಂದ್ರ ಹೆಸರು ಕೇಳದವರೇ ವಿರಳ. ಇಂದು ಈ ಜೋಡಿಯಲ್ಲಿ ಒಬ್ಬರಾದ ನಾಗೇಂದ್ರ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆಸ್ಪತ್ರೆಯ ವೆಚ್ಚ ಭರಿಸಲೂ ಹಣವಿಲ್ಲದೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಪ್ರಾಣಕ್ಕಿಂತಲೂ ಮಾನವೇ ಹೆಚ್ಚು ಎನ್ನುವ ನಾಗೇಂದ್ರ ಅವರ ಆರ್ಥಿಕ ಸ್ಥಿತಿಯೂ ಉತ್ತಮವಾಗೇನೂ ಇಲ್ಲ. ಹೃದಯ ಶ್ರೀಮಂತರೂ, ಸಂಗೀತ ವಿದ್ಯಾ ಸಂಪನ್ನರೂ ಆದ ನಾಗೇಂದ್ರ ಬದುಕು ಕಡು ಬಡತನದಲ್ಲೇ ಸಾಗಿದೆ. ನಾಗೇಂದ್ರ ಅವರು ಆಸ್ಪತ್ರೆ ಸೇರಿ 15 ದಿನಗಳೇ ಕಳೆದಿವೆ. ರಾಜ್ ಅಪಹರಣದ ಗುಂಗಿನಲ್ಲಿರುವ ಕನ್ನಡ ಚಿತ್ರೋದ್ಯಮಕ್ಕೆ, ಚಿತ್ರ ರಸಿಕರಿಗೆ ನಾಗೇಂದ್ರದ ಅನಾರೋಗ್ಯ ಸುದ್ದಿಯೇ ಆಗಲಿಲ್ಲ. ಹರ್ನಿಯಾ ತೊಂದರೆಗಾಗಿ ಶಸ್ತ್ರಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆ ಸೇರಿದ ನಾಗೇಂದ್ರ ಈಗ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಕೃಶರಾಗಿದ್ದಾರೆ.
ದೈಹಿಕವಾಗಿ, ಮಾನಸಿಕವಾಗಿ ಬಳಲಿರುವ ನಾಗೇಂದ್ರ ಹಣದ ಕೊರತೆಯಿಂದಾಗಿ ಜನರಲ್ ವಾರ್ಡ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಳತೆಗೆ ಹೆಸರಾದ ನಾಗೇಂದ್ರ ಸ್ಪೆಷಲ್ ವಾರ್ಡ್ ಬೇಡ. ನಾನೊಬ್ಬ ಸಾಮಾನ್ಯ ಮನುಷ್ಯ ನನಗೆ ಸಾರ್ವಜನಿಕ ವಾರ್ಡ್ ಸಾಕು ಎಂದು ಹೇಳಿದರೆನ್ನುತ್ತಾರೆ ಅವರ ಪತ್ನಿ.
ಎಂದೂ ಯಾರ ಮುಂದು ಕೈಚಾಚದ ನಾಗೇಂದ್ರ ಸರಕಾರದ ನೆರವನ್ನೂ ಕೋರಿಲ್ಲ. ಮಹಾ ಸ್ವಾಭಿಮಾನಿಯಾದ ನಾಗೇಂದ್ರ ಅವರು, ಸರಕಾರದ ನೆರವು ಬೇಡ ಎಂದು ಹೇಳುತ್ತಿದ್ದಾರಂತೆ. ಆದರೆ, ಕನ್ನಡ ಚಿತ್ರರಂಗಕ್ಕೆ ಅಸಾಧಾರಣ ಸೇವೆ ಸಲ್ಲಿಸಿರುವ ನಾಗೇಂದ್ರರ ಶುಶ್ರೂಷೆಯ ವೆಚ್ಚವನ್ನು ಸರಕಾರ ಭರಿಸಬೇಕು ಎನ್ನುವುದು ಅವರ ಅಭಿಮಾನಿಗಳ ಕೋರಿಕೆ ಆಗಿದೆ.