ಗುರುವಾರದಿಂದ ನಗರದಲ್ಲಿ ಹೃದ್ರೋಗ ತಜ್ಞರ ಸಮಾವೇಶ
ಬೆಂಗಳೂರು : ದಿ ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಅಖಿಲ ಭಾರತ ಹೃದ್ರೋಗ ತಜ್ಞರ ಸಂಘಟನೆ. ಈ ಸಂಘಟನೆ ಗುರುವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ತನ್ನ 7ನೇ ವಾರ್ಷಿಕ ಸಮಾವೇಶವನ್ನು ಏರ್ಪಡಿಸಿದೆ.
ಹೊಟೆಲ್ ಅಶೋಕಾದಲ್ಲಿ ನಡೆಯುವ ಈ ಸಮಾವೇಶದಲ್ಲಿ ದೇಶ ವಿದೇಶಗಳ ಸುಮಾರು 400ಕ್ಕೂ ಹೆಚ್ಚು ಹೃದಯ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ತಜ್ಞರು ಚರ್ಚೆ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವಿಷಯವನ್ನು ಸಮಾವೇಶದ ಸಂಘಟನಾ ಕಾರ್ಯದರ್ಶಿ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೃದಯ ರೋಗ ಚಿಕಿತ್ಸೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸಂಶೋಧನೆಗಳು ನಡೆದಿವೆ. ಶಸ್ತ್ರ ಚಿಕಿತ್ಸೆ ಇಲ್ಲದೆಯೂ ಕೆಲವು ಹೃದಯ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಹೃದಯ ಬಡಿತ ನಿಲ್ಲಿಸದೆಯೂ ಬೈಪಾಸ್ ಸರ್ಜರಿ ಮಾಡಬಹುದಾಗಿದೆ. ಇಂತಹ ಅಧುನಿಕ ಆವಿಷ್ಕಾರದ ವಿಷಯಗಳು ಮೂರು ದಿನಗಳ ಸಮಾವೇಶದಲ್ಲಿ ಚರ್ಚೆಗೆ ಬರಲಿವೆ. ಇದರಿಂದ ದೇಶ ವಿದೇಶಗಳ ಹೃದಯ ತಜ್ಞರಿಗೆ ಹೆಚ್ಚಿನ ಮಾಹಿತಿ ದೊರಕುತ್ತದೆ ಎಂದು ಅವರು ಹೇಳಿದರು.
ಹೃದಯದಲ್ಲಿ ಬೀಳುವ ಸಣ್ಣ ರಂಧ್ರಗಳನ್ನು ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸುವ ಬಗ್ಗೆ ಸ್ವತಃ ತಾವೇ ಪ್ರಬಂಧ ಮಂಡಿಸುತ್ತಿರುವುದಾಗಿ ತಿಳಿಸಿದ ಮಂಜುನಾಥ್ ಅವರು, 15ಕ್ಕೂ ಹೆಚ್ಚು ಖ್ಯಾತ ಹೃದ್ರೋಗ ತಜ್ಞರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.