ನಾಗಪ್ಪ ನಾಪತ್ತೆ , ಇಡೀ ಪ್ರಕರಣ ನಿಗೂಢ
ಬೆಂಗಳೂರು : ವೀರಪ್ಪನ್ ವಶದಿಂದ ತಪ್ಪಿಸಿಕೊಂಡು ಬಂದಿರುವ ನಾಗಪ್ಪ ತನ್ನ ಪತ್ನಿ ಹಾಗೂ ಪುತ್ರಿಯ ಜೊತೆ ಶನಿವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಿದ ನಾಗಪ್ಪ ಅನುಗ್ರಹದಲ್ಲಿ ಕೃಷ್ಣ ಅವರೊಂದಿಗೆ 10 ನಿಮಿಷ ಮಾತುಕತೆ ನಡೆಸಿ, ನಂತರ 10 ನಿಮಿಷ ಪತ್ರಿಕೊಗೋಷ್ಠಿಯಲ್ಲಿ ಮಾತನಾಡಿದ್ದರು. ಗೋಷ್ಠಿಯ ನಂತರ ಆರೋಗ್ಯ ತಪಾಸಣೆಗೆ ಮಲ್ಯ ಆಸ್ಪತ್ರೆಗೆ ತೆರಳಿದ್ದ ಅವರು ಆಮೇಲೆ ಪಾರ್ವತಮ್ಮನವರನ್ನು ಭೇಟಿ ಮಾಡಿ ಅಲ್ಲಿದ್ದ ಪೊಲೀಸ್ ಅಧಿಕಾರಿ ಕೆಂಪಯ್ಯನವರೊಂದಿಗೆ ಮಾತುಕತೆ ನಡೆಸಿದ್ದರು.
ಸಮಾಲೋಚನೆ ನಂತರ ರಾತ್ರಿ ಶಿವರಾಜ್ಕುಮಾರ್ ಅವರ ಮನೆಗೆ ತೆರಳಿದ ನಾಗಪ್ಪ, ಬೆಳಿಗ್ಗೆ ಶಿವರಾಜ್ ಮನೆಯನ್ನು ಬಿಟ್ಟವರು ತಮ್ಮ ಪತ್ನಿ ಹಾಗೂ ಪುತ್ರಿಯಾಂದಿಗೆ ಎಲ್ಲಿಗೆ ಹೋಗಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.
ಶನಿವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಗಪ್ಪ ಅವರನ್ನು ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ, ಮುಗುಮ್ಮಾಗಿ ಉತ್ತರಿಸಿದ ಪೋಲೀಸ್ ಮಹಾನಿರ್ದೇಶಕ ಸಿ. ದಿನಕರ್, ನಾಗಪ್ಪ ಅವರು ಹೇಳಿರುವ ವಿವರಣೆ ಸುಳ್ಳು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಮಾವ ಮತ್ತು ಸಂಬಂಧಿಕರಿಗೂ ನಾಗಪ್ಪ ಅವರ ನಿಗೂಢ ನಾಪತ್ತೆ ಪ್ರಕರಣದ ಬಗ್ಗೆ ಗೊತ್ತಿಲ್ಲ. ರಾಜ್ ಅಪಹರಣ ಪ್ರಕರಣದಲ್ಲಿ ಮೊದಲ ಬಾರಿಗೆ ಆಗಿರುವ ಈ ನಿಗೂಢ ಪ್ರಕರಣ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕಾಡಿನಲ್ಲಿ ಏನಾಗಿದೆ, ನಾಗಪ್ಪ ಬಂದ ಬಗೆ ಹೇಗೆ ಎಂಬ ಬಗ್ಗೆ ಇದ್ದ ಅನೇಕ ಊಹಾಪೋಹಗಳಿಗೆ ಇನ್ನಷ್ಟು ಇಂಬು ನೀಡಿದೆ.
ಇದೀಗ ಬಂದಿರುವ ವರ್ತಮಾನದ ಪ್ರಕಾರ ನಾಗಪ್ಪ ಅವರನ್ನು ಪತ್ನಿ ಮತ್ತು ಪುತ್ರಿಯ ಸಮೇತ ಬೆಂಗಳೂರಿನ ಖ್ಯಾತ ವೈದ್ಯರೊಬ್ಬರ ಅತಿಥಿಗೃಹದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.