ಜೆಎಂಎಂ ಲಂಚ ಪ್ರಕರಣ: ಮೊಯ್ಲಿ, ರೆಡ್ಡಿ, ರೇವಣ್ಣ ಖುಲಾಸೆ
ಬೆಂಗಳೂರು: ಜಾರ್ಖಾಂಡ್ ಮುಕ್ತಿ ಮೋರ್ಚಾ ಸಂಸದರಿಗೆ ನೀಡಿದ ಬಹುಕೋಟಿ ಲಂಚ ಪ್ರಕರಣದಲ್ಲಿ ಭಾಗಿಗಳಾದ ಆರೋಪ ಎದುರಿಸುತ್ತಿದ್ದ ರಾಜ್ಯದ ಮಾಜಿ ಮಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ, ಮಾಜಿ ಮಂತ್ರಿಗಳಾದ ಎಚ್. ಎಂ. ರೇವಣ್ಣ ಮತ್ತು ರಾಮಲಿಂಗಾರೆಡ್ಡಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
1993ರಲ್ಲಿ ಪಿ.ವಿ. ನರಸಿಂಹರಾವ್ ಅವರ ಅಲ್ಪ ಮತದ ಕೇಂದ್ರ ಸರ್ಕಾರ ಅವಿಸ್ವಾಸ ಗೊತ್ತುವಳಿಯನ್ನು ಎದುರಿಸುವಾಗ ಗೊತ್ತುವಳಿಯ ವಿರುದ್ಧ ಮತ ಪಡೆಯಲು ಜೆಎಂಎಂ ಸಂಸತ್ ಸದಸ್ಯರಿಗೆ ಲಂಚ ನೀಡಿದ ಪ್ರಕರಣದಲ್ಲಿ ರಾಜ್ಯ ಈ ಮೂವರು ಸೇರಿದಂತೆ ಅಬಕಾರಿ ಉದ್ಯಮಿಗಳಾದ ಡಿ.ಕೆ .ಆದಿಕೇಶವುಲು, ಎಂ. ತಿಮ್ಮೇಗೌಡ ಮತ್ತು ಮಾಜಿ ಸಂಸದರಾದ ವಿ. ರಾಜೇಶ್ವರರಾವ್ ಆರೋಪ ಎದುರಿಸುತ್ತಿದ್ದರು.
ಭಾರತೀಯ ದಂಡ ಸಂಹಿತೆಯ 120 ಬಿ ಮತ್ತು ಲಂಚ ನಿಷೇಧ ಕಾಯ್ದೆ ಅನ್ವಯ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಮಾಜಿ ಕೇಂದ್ರ ಸಚಿವ ಬೂಟಾಸಿಂಗ್ ಅವರನ್ನು ವಿಶೇಷ ನ್ಯಾಯಾಲಯ ಶುಕ್ರವಾರ ತಪ್ಪಿತಸ್ಥರೆಂದು ತೀರ್ಪು ನೀಡಿ, ಉಳಿದ ಒಂಬತ್ತು ಮಂದಿ ಆರೋಪಿಗಳನ್ನು ಆರೋಪಮುಕ್ತಗೊಳಿಸಿದೆ.
ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 11ರಂದು ಪ್ರಕಟಿಸಲಾಗುವುದೆಂದು ನ್ಯಾಯಮೂರ್ತಿ ಅಜಿತ್ ಬಾರಿಹೋಕ್ ತೀರ್ಪಿನಲ್ಲಿ ತಿಳಿಸಿದ್ದಾರೆ.