ವೀರಪ್ಪನ್ ಕಣ್ತಪ್ಪಿಸಿ ಅಡಗುತಾಣದಿಂದ ತಪ್ಪಿಸಿಕೊಂಡು ಬಂದ ನಾಗಪ್ಪ
ಮೈಸೂರು : ನಾಗಪ್ಪ ಅವರನ್ನು ವೀರಪ್ಪ ಬಿಡುಗಡೆ ಮಾಡಿಲ್ಲ , ಅವರು ನರಹಂತಕನ ಕಣ್ಣು ತಪ್ಪಿಸಿ ಕಾಡಿನಿಂದ ಓಡಿ ಬಂದಿದ್ದಾರೆ.
ನಾಗಪ್ಪ ವೀರಪ್ಪನ್ ವಶದಿಂದ ತಪ್ಪಿಸಿಕೊಂಡು ಗಾಜನೂರಿಗೆ ಬಂದಿರುವುದನ್ನು ರಾಜ್ಕುಮಾರ್ ಅವರ ಕುಟುಂಬದ ಮೂಲಗಳೂ ಖಚಿತ ಪಡಿಸಿವೆ. ಅನಾರೋಗ್ಯದಿಂದ ಬಳಲುತಿದ್ದ ನಾಗಪ್ಪ ಅವರು, ಗಾಜನೂರಿನಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ತಿಳಿಸಿದ್ದಾರೆ.
ಕಳೆದ 60 ದಿನಗಳಿಂದಲೂ ವೀರಪ್ಪನ್ ವಶದಲ್ಲಿದ್ದ ನಾಗಪ್ಪ ಅವರು, ಮಲ ವಿಸರ್ಜನೆಗೆಂದು ಹೋದವರು, ವೀರಪ್ಪನ್ ಚಾರರ ಕಣ್ಣುತಪ್ಪಿಸಿ, ಗಾಜನೂರಿಗೆ ಓಡಿ ಬಂದಿದ್ದಾರೆಂದು, ಗಾಜನೂರಿನಲ್ಲಿ ಅವರನ್ನು ನೋಡಿರುವ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಳಿದ ಒತ್ತೆಯಾಳುಗಳ ಮೇಲೆ ಪರಿಣಾಮ ಏನು ? : ನಾಗಪ್ಪ ಅವರೇನೋ ವೀರಪ್ಪನ್ ವಶದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆದರೆ, ಇದರಿಂದ ಕಾಡಿನಲ್ಲಿ ವೀರಪ್ಪನ್ ವಶದಲ್ಲಿರುವವರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಬಗ್ಗೆ ಎಲ್ಲರ ಚಿಂತೆ ಆಗಿದೆ. ಗೋಪಾಲ್ ಮತ್ತು ವೀರಪ್ಪನ್ ನಡುವೆ ನಾಲ್ಕನೇ ಸುತ್ತಿನ ನಿರ್ಣಾಯಕ ಸಂಧಾನ ಮಾತುಕತೆಗಳು ನಡೆಯುತ್ತಿರುವಾಗ ನಾಗಪ್ಪ ತಪ್ಪಿಸಿಕೊಂಡಿರುವುದು, ವೀರಪ್ಪನ್ಗೆ ನುಂಗಲಾರದ ತುತ್ತಾಗಿರಲಿಕ್ಕೂ ಸಾಕು. ಗುರುವಾರ ಕರ್ನಾಟಕದಲ್ಲಿ ಬಂದ್ ನಡೆಯುತ್ತಿದ್ದಾಗ, ಅತ್ತ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಕರುಣಾನಿಧಿ ಅವರು, ರಾಜ್ಕುಮಾರ್ ಅವರ ಬಿಡುಗಡೆ ಗುರುವಾರವೇ ಆದರೂ ಆಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ನಾಗಪ್ಪ ಈಗ ವೀರಪ್ಪನ್ ವಶದಿಂದ ತಪ್ಪಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಕುಮಾರ್ ಹಾಗೂ ಮತ್ತಿಬ್ಬರ ಬಿಡುಗಡೆ ಮತ್ತಷ್ಟು ವಿಳಂಬವಾದರೂ ಆಗಬಹುದು ಶಂಕೆ ಮೂಡಿದೆ.