ವೀರಪ್ಪನ್ ವಶದಲ್ಲಿದ್ದ ಒತ್ತೆಯಾಳು ನಾಗಪ್ಪ ಬಿಡುಗಡೆ
ಮೈಸೂರು : ಕಳೆದ 60 ದಿನಗಳಿಂದ ಡಾ. ರಾಜ್ಕುಮಾರ್ ಅವರ ಸಂಗಡ ವೀರಪ್ಪನ್ ವಶದಲ್ಲಿದ್ದ ಒತ್ತೆಯಾಳುಗಳಲ್ಲೊಬ್ಬರಾದ ನಾಗಪ್ಪ ಅವರನ್ನು ವೀರಪ್ಪನ್ ಗುರುವಾರ ಸಂಜೆ ಬಿಡುಗಡೆ ಮಾಡಿದ್ದಾನೆ.
ಗುರುವಾರ ಸಂಜೆ ದಿಂಬಂ ಅರಣ್ಯ ಪ್ರದೇಶದ ಸರಹದ್ದಿನಲ್ಲಿ ಪ್ರತ್ಯಕ್ಷನಾದ ನಾಗಪ್ಪ ಅವರನ್ನು ಗಾಜನೂರಿಗೆ ಕರೆತರಲಾಯಿತು. ಗಾಜನೂರಿನಿಂದ ನಾಗಪ್ಪ ಬೆಂಗಳೂರಿನತ್ತ ಹೊರಟಿದ್ದು, ಯಾವುದೇ ಕ್ಷಣದಲ್ಲಿ ಬೆಂಗಳೂರು ತಲುಪಿ, ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಭೇಟಿ ಆಗಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಆದರೂ, ನಾಗಪ್ಪ ಬಿಡುಗಡೆಯಾಗಿದ್ದಾರೆ ಎಂಬುದನ್ನು ನಮ್ಮ ಮೈಸೂರು ಪ್ರತಿನಿಧಿ ಖಾತ್ರಿ ಪಡಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು, ಡಾ. ರಾಜ್ಕುಮಾರ್ ಅವರ ಬಿಡುಗಡೆ ಗುರುವಾರವೇ ಆಗುತ್ತದೆ ಎಂಬ ಸೂಚನೆ ನೀಡಿದ್ದರು. ಆದರೆ, ನಾಗಪ್ಪ ಅವರ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ ಡಾ. ರಾಜ್ಕುಮಾರ್ ಅವರ ಬಿಡುಗಡೆ ಯಾವುದೇ ಕ್ಷಣದಲ್ಲಾದರೂ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ ಭೀಮನ ಅಮಾವಾಸ್ಯೆಯಂದು ವೀರಪ್ಪನ್ ದೊಡ್ಡ ಗಾಜನೂರಿನಿಂದ ಡಾ. ರಾಜ್ಕುಮಾರ್, ನಾಗಪ್ಪ, ಗೋವಿಂದರಾಜು ಹಾಗೂ ನಾಗೇಶ್ ಅವರನ್ನು ಅಪಹರಿಸಿದ್ದ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಸಾಮಾನ್ಯವಾಗಿ ತನ್ನ ಎಲ್ಲ ಕಾರ್ಯಾಚರಣೆಯನ್ನೂ ಕಾಳಿಕಾದೇವಿಯ ಪೂಜೆ ಮಾಡಿ ಅಮಾವಾಸ್ಯೆಯ ದಿನದಂದೇ ಮಾಡುವ ವೀರಪ್ಪನ್ ನಾಗಪ್ಪ ಅವರನ್ನು ಅಮಾವಾಸ್ಯೆಯ ದಿನವೇ ಬಿಡುಗಡೆ ಮಾಡಿದ್ದಾನೆ.