ಬಂದ್ಗೆ ಕುಮ್ಮಕ್ಕು ನೀಡಿದ ಬಂಗಾರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಂಗಳೂರು : ಅಪಹೃತ ರಾಜ್ಕುಮಾರ್ ಅವರ ಬೀಗರೂ ಆದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕರ್ನಾಟಕ ಬಂದ್ಗೆ ಬಹಿರಂಗ ಬೆಂಬಲ ನೀಡಿರುವುದರಿಂದ ಮುಜುಗರಕ್ಕೆ ಒಳಗಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೈಕಮಾಂಡ್ಗೆ ದೂರಿತ್ತಿದೆ.
ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲೇ ನಡೆಯುತ್ತಿರುವ ಬಂದ್ಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವ ಮೂಲಕ ಬಂಡಾಯದ ಕಹಳೆ ಊದಿರುವ ಬಂಗಾರಪ್ಪ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಆಂತರಿಕ ವಲಯದಲ್ಲೇ ಭಾರಿ ಕೂಗೆದ್ದಿದೆ. ಬಂಗಾರಪ್ಪನವರ ಈ ಧೋರಣೆಯನ್ನು ಬಹಿರಂಗವಾಗಿಯೇ ಸಚಿವ ವಿಶ್ವನಾಥ್ ಆಕ್ಷೇಪಿಸಿದ್ದರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹೆಸರನ್ನು ಹೇಳದೆಯೇ ರಾಜ್ ಅಪಹರಣವನ್ನು ರಾಜಕೀಯಕ್ಕೆ ಬಳಸುವುದು ಕದಡಿದ ನೀರಿನಲ್ಲಿ ಮೀನು ಹಿಡಿದಂತೆ ಎಂದು ಬಣ್ಣಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಎಐಸಿಸಿಗೆ ವರದಿ ಸಲ್ಲಿಸಿರುವ ಪ್ರದೇಶ ಕಾಂಗ್ರೆಸ್ ಸಮಿತಿ, ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ವಾಸ್ತವವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗಾಗಲೀ, ರಾಜ್ ಪುತ್ರರಿಗಾಗಲೀ ಬಂದ್ ಆಚರಿಸುವ ಉದ್ದೇಶವೇ ಇರಲಿಲ್ಲ. ಬಂದ್ಗೆ ಕುಮ್ಮಕ್ಕು ಕೊಟ್ಟಿರುವವರೇ ಬಂಗಾರಪ್ಪ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರುತ್ತಿದ್ದಾರೆ.
ಮುಖಪುಟ / ರಾಜ್ ಅಪಹರಣ/ಬಂದ್: ಬೇಕೆ? ಬೇಡವೆ?