ಕರ್ನಾಟಕ ಬಂದ್ ಆರಂಭವಾದ ಮೂರು ಗಂಟೆಗಳು...
ಬೆಂಗಳೂರು : ರಾಜ್ ಬಿಡುಗಡೆಗೆ ಒತ್ತಾಯಿಸಿ ಇಂದು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಸುವಂತೆ ಕರೆನೀಡಿರುವ ಕರ್ನಾಟಕ ಬಂದ್ ಬೆಳಗ್ಗೆ 9 ಗಂಟೆಯವರೆಗೆ ಶಾಂತಿಯುತವಾಗಿತ್ತು. ಈ ಹೊತ್ತಿನವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ವರದಿ ಬಂದಿಲ್ಲ.
ಬೆಂಗಳೂರಿನ ಎಲ್ಲೆಲ್ಲಿ ನೋಡಿದರೂ, ಅಲ್ಲೆಲ್ಲಾ ಪೊಲೀಸರೇ ಕಾಣುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಆರ್.ಎ.ಎಫ್ ಹಾಗೂ ಮೀಸಲು ಪಡೆಯ ತುಕಡಿಗಳನ್ನು ನೀಯೋಜಿಸಲಾಗಿದೆ. ಹಿಂಸಾಚಾರಕ್ಕೆ ಇಳಿಯುವವರನ್ನು ನಿರ್ಧಾಕ್ಷಿಣ್ಯವಾಗಿ ಬಂದಿಸುವಂತೆ ಆದೇಶ ನೀಡಲಾಗಿದೆ.
ತೆರೆದ ಅಂಗಡಿಗಳು : ಬೆಂಗಳೂರಿನಲ್ಲಿ ಬೆಳಗ್ಗೆ ಹಾಲು, ತರಕಾರಿ, ವೃತ್ತಪತ್ರಿಕೆಗಳ ಅಂಗಡಿಗಳು ತೆರೆದಿದ್ದವು. ಅಲ್ಲೊಂದು ಇಲ್ಲೊಂದು ಹೊಟೆಲ್ಗಳೂ ಬಾಗಿಲು ತೆರೆದಿದ್ದವು. ಔಷಧದ ಅಂಗಡಿಗಳು ಮಾತ್ರ ತಮ್ಮ ಸಂಘದ ಕರೆಯ ಮೇರೆಗೆ ಬಂದ್ಗೆ ಬೆಂಬಲ ನೀಡಿದ್ದವು. ಶಾಲೆ ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.
ರಸ್ತೆಗಳಿಗೆ ಬಣ್ಣ : ಆಗೊಮ್ಮೆ , ಈಗೊಮ್ಮೆ ನಗರ ಸಾರಿಗೆ ವಾಹನಗಳು ಸುಳಿದಾಡುತ್ತಿದ್ದವು. ಬೆಳಗ್ಗೆ 9ರವರೆಗೆ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲೂ ಕೆಲವು ಅಂಗಡಿಗಳು ತೆರೆದಿದ್ದವು. ವಿರಳವಾಗಿ ಆಟೋರಿಕ್ಷಾಗಳು ಸಂಚರಿಸುತ್ತಿದ್ದವು. ದ್ವಿಚಕ್ರ ವಾಹನಗಳಂತೂ ಯಾವುದೇ ಅಡ್ಡಿ - ಆತಂಕಗಳಿಲ್ಲದೆ ರಸ್ತೆಗಿಳಿದಿದ್ದವು. ಆದರೂ, ಸಂಚಾರ ಮಾಮೂಲಿನಂತಿರಲಿಲ್ಲ. ಸಂಚಾರದ ಒತ್ತಡ ಇಲ್ಲದ ಕಾರಣ ಸಂಚಾರಿ ಪೊಲೀಸರು ಜೀಬ್ರಾ ಕ್ರಾಸಿಂಗ್ಗಳಿಗೆ ಬಣ್ಣ ಬಳಿಸುವ ಕಾಯಕದಲ್ಲಿ ನಿರತರಾಗಿದ್ದರು.
ಕಾಲಿಗೆ ಬುದ್ಧಿ : ಶ್ರೀನಗರ, ಹನುಮಂತನಗರ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ, ಶ್ರೀರಾಮಪುರ, ಮೈಕೋ ಲೇಔಟ್, ಗೆಳೆಯರ ಬಳಗ, ಡಾ. ರಾಜ್ಕುಮಾರ್ ರಸ್ತೆ, ಕೋರಮಂಗಲಗಳಲ್ಲಿ ಸುತ್ತಾಡಿ ಬಂದ ನಮ್ಮ ವರದಿಗಾರರ ರೀತ್ಯ ಬಂದ್ ಈವರೆಗೆ ಶಾಂತಿಯುತವಾಗಿದೆ. ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಶ್ರೀನಗರದಲ್ಲಿ ಬಲವಂತದಿಂದ ಅಂಗಡಿ ಬಾಗಿಲು ಮುಚ್ಚಿಸಲು ಬಂದ ಗುಂಪೊಂದು ವಜ್ರ ಪ್ರಹಾರ ದಳದ ವಾಹನ ಕಂಡು ಕಾಲಿಗೆ ಬುದ್ಧಿಹೇಳಿದೆ.
ತುರುವೇಕೆರೆಯಲ್ಲಿ ಬಂದ್ ಇಲ್ಲ : ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ತುಮಕೂರು ಜಿಲ್ಲೆಯ ಒಂದು ತಾಲೂಕು ತುರುವೇಕೆರೆ. ಇಲ್ಲಿ ನ ಹಲವಾರು ಗ್ರಾಮಗಳಲ್ಲಿ ಪಕ್ಷಾಚರಣೆ ಇರುವ ಕಾರಣ ಬಂದ್ ನಡೆಸದಿರಲು ಇಲ್ಲಿನ ಮುಖಂಡರು ನಿರ್ಧರಿಸಿದ್ದಾರೆ.
ಮುಖಪುಟ / ರಾಜ್ ಅಪಹರಣ