ಕರ್ನಾಟಕ ಬಂದ್ ನಿಷೇಧಕ್ಕೆ ನಿರ್ದೇಶನ ಕೋರಿ ರಿಟ್
ಬೆಂಗಳೂರು: ರಾಜ್ಯಚಲನಚಿತ್ರ ವಾಣಿಜ್ಯಮಂಡಳಿ ಹಾಗೂ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘಗಳು ಸೆ. 28ರಂದು ರಾಜ್ಯಾದ್ಯಂತ ಬಂದ್ ಆಚರಿಸುವಂತೆ ಕರೆ ನೀಡಿರುವುದನ್ನು ನಿಷೇಧಿಸುವಂತೆ, ರಾಜ್ಯ ಸರಕಾರ ಮತ್ತು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಸೋಮವಾರ ಹೈಕೋರ್ಟ್ನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅರ್ಜಿಗಳನ್ನು ಇನ್ನೂ ಸ್ವೀಕೃತವಾಗಬೇಕಿದ್ದು, ಮಂಗಳವಾರ ವಿಚಾರಣೆಗೆ ಬರವ ಸಾಧ್ಯತೆ ಇದೆ.
ನಗರದ ವಾಸುದೇವ್ ಎಂಬ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ಬಂದ್ಗೆ ಕರೆ ನೀಡಿರುವುದು ಕಾನೂನುಬಾಹಿರ ಹಾಗೂ ಸಂವಿಧಾನದ 21 ಮತ್ತು 22ನೇ ವಿಧಿಗಳ ನೇರ ಉಲ್ಲಂಘನೆಯಾಗಿದೆ. ಇದರಿಂದ ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆ ಮತ್ತು ಶಾಲಾ-ಕಾಲೇಜಿಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಸಾರ್ವಜನಿಕ ಸ್ವಾತಂತ್ರಕ್ಕೆ ದಕ್ಕೆಯಾಗುವುದಲ್ಲದೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗಲಿದೆ ಎಂದು ವಾದಿಸಿದ್ದಾರೆ.
ಬಂದ್ ಕರೆ ಸುಪ್ರೀಂಕೋರ್ಟ್ನ ಆದೇಶಕ್ಕೆ ವಿರುದ್ಧವಾದುದು ಎಂದೂ ಅರ್ಜಿದಾರರು ಹೇಳಿದ್ದಾರೆ.
ಬಂದ್ ಮೂಲಕ ಒತ್ತಡ : ಕಳೆದ ಜುಲೈ 30ರಿಂದ ವೀರಪ್ಪನ್ ವಶದಲ್ಲಿರುವ ವರನಟ ಡಾ. ರಾಜ್ ಅವರ ಬಿಡುಗಡೆ ಸಂಬಂಧ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಯತ್ನಗಳನ್ನು ಮುಂದುವರಿಸಿರುವಂತೆಯೇ ಸರಕಾರಗಳ ಮೇಲೆ ಒಂದಗಳ ಮೂಲಕ ಒತ್ತಡ ಹೆಚ್ಚಿಸುವ ಯತ್ನಗಳು ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ನಿಟ್ಟಿನಲ್ಲಿ ಈಗಾಗಲೇ ಮೈಸೂರು ಬಂದ್ ಸಂಪೂರ್ಣ ಯಶಸ್ವಿಯಾಗಿ ನಡೆದಿದೆ. ವಿಶ್ವವಿಖ್ಯಾತ ದಸರಾ ಉತ್ಸವದ ಅಂಗವಾಗಿ ಸೆಪ್ಟಂಬರ್ 28ರ ಗುರುವಾರ ಕರೆ ನೀಡಿರುವ ಬಂದ್ನಿಂದ ಮೈಸೂರನ್ನು ಹೊರಗಿಡಲಾಗಿದೆ.
ಬಂದ್ ಯಾವ ವ್ಯಕ್ತಿ ಅಥವಾ ಸರಕಾರದ ವಿರುದ್ಧವೂ ಅಲ್ಲ. ರಾಜ್ ಅವರ ಸುರಕ್ಷಿತ ಬಿಡುಗಡೆಗೆ ಜನಬೆಂಬಲ ಕೋರುವುದರ ಜೊತೆಗೆ ಕೇಂದ್ರದ ಗಮನ ಸೆಳೆಯುವುದು ಬಂದ್ನ ಉದ್ದೇಶ ಎಂದು ರಾಜ್ ಪುತ್ರರು ಈಗಾಗಲೆ ಸ್ಪಷ್ಟಪಡಿಸಿದ್ದಾರೆ.