ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ಕುಮಾರ್‌ರನ್ನು ತಕ್ಷಣ ಬಿಡುವ ಬಗ್ಗೆ ವೀರಪ್ಪನ್‌ ಚಿಂತನೆ ?

By Staff
|
Google Oneindia Kannada News

ಚೆನ್ನೈ : ರಾಜ್‌ಕುಮಾರ್‌ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್‌ಕುಮಾರ್‌ ಅವರನ್ನು ಮಾತ್ರ ಬಿಡುಗಡೆ ಮಾಡಿ ಉಳಿದ ಮೂವರನ್ನು ತನ್ನ ವಶದಲ್ಲಿಟ್ಟುಕೊಂಡು ತನ್ನ ಬೇಡಿಕೆಗಳ ಈಡೇರಿಸಿಕೊಳ್ಳುವ ಬಗ್ಗೆ ವೀರಪ್ಪನ್‌ ಚಿಂತೆ ಮಾಡುತ್ತಿದ್ದಾನಂತೆ.

ಕಳೆದ ವಾರವೇ ಅನಾರೋಗ್ಯದಿಂದ ಬಳಲಿರುವ ರಾಜ್‌ಕುಮಾರ್‌ ಅವರನ್ನು ಬಿಟ್ಟು ಬಿಡುವ ನಿರ್ಧಾರವನ್ನು ವೀರಪ್ಪನ್‌ ಕೈಗೊಂಡಿದ್ದನಂತೆ. ಆದರೆ, ತಮಿಳು ಉಗ್ರರ ನಾಯಕ ಮಾರನ್‌ ಇದಕ್ಕೆ ಅಡ್ಡಿ ಬಂದನೆಂದು ಕೇರಳ ಕೌಮುದಿ ಬೆಂಗಳೂರು ಆವೃತ್ತಿ ವರದಿ ಮಾಡಿದೆ.

ರಾಜ್‌ಕುಮಾರ್‌ ಅವರಿಗೆ ಏನಾದರೂ ತೊಂದರೆ ಆದರೆ, ತನಗೆ ಉಳಿಗಾಲವಿಲ್ಲ. ಜನ ರೊಚ್ಚಿಗೆದ್ದು ಕಾಡಿಗೆ ನುಗ್ಗಿದರೆ, ತಾನು ಇಷ್ಟು ವರ್ಷದಿಂದ ಕಾಡಿನಲ್ಲಿ ಕಟ್ಟಿರುವ ಸಾಮ್ರಾಜ್ಯ ನುಚ್ಚು ನೂರಾಗುತ್ತದೆ ಎಂಬ ಕಲ್ಪನೆ ಇರುವ ವೀರಪ್ಪನ್‌ ರಾಜ್‌ಕುಮಾರ್‌ ಅವರನ್ನು ಮಾತ್ರ ಬಿಡುಗಡೆ ಮಾಡುವ ಬಗ್ಗೆ ಚಿಂತಿಸುತ್ತಿದ್ದಾನೆ.

ಈವರೆಗೆ ಗೋಪಾಲ್‌ಗೆ ಯಾವುದೇ ಸಂಕೇತ ದೊರೆತಿಲ್ಲ. ಮಳೆಯ ಕಾರಣ, ವೀರಪ್ಪನ್‌ ಅಡಗುತಾಣ ಬದಲಾಯಿಸುತ್ತಿರುವುದೇ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಸೋಮವಾರ ಗೋಪಾಲ್‌ಗೆ ವೀರಪ್ಪನ್‌ ತನ್ನ ಚಾರರ ಮೂಲಕ ಸಂದೇಶ ಕಳುಹಿಸಲಿದ್ದು, ರಾಜ್‌ಕುಮಾರ್‌ ಅವರ ಆರೋಗ್ಯ ಸುಧಾರಿಸದಿದ್ದರೆ, ಅವರನ್ನು ಬಿಡುಗಡೆ ಮಾಡಿ ಗೋಪಾಲ್‌ ಜೊತೆಗೆ ಕಳಿಸಿಕೊಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯಪಾಲರ ಭೇಟಿ : ಈ ಮಧ್ಯೆ ಕರ್ನಾಟಕದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು ಮುಖ್ಯಮಂತ್ರಿ ಕೃಷ್ಣ ಅವರೊಂದಿಗೆ ರಾಜ್‌ ಬಿಡುಗಡೆ ವಿಳಂಬದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದು ಕೇವಲ ಸೌಜನ್ಯದ ಭೇಟಿಯಾಗಿತ್ತು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X