28ರ ಕರ್ನಾಟಕ ಬಂದ್ ಮೈಸೂರಿಗೆ ಅನ್ವಯಿಸುವುದಿಲ್ಲ : ಸ್ಪಷ್ಟನೆ
ಮೈಸೂರು : ರಾಜ್ ಬಿಡುಗಡೆಗೆ ಮೊನ್ನೆಯಷ್ಟೇ ಬಂದ್ ಆಚರಿಸಿದ ಮೈಸೂರು ನಗರಕ್ಕೆ ಮಾತ್ರ ಸೆ. 28ರ ಕರ್ನಾಟಕ ಬಂದ್ ಅನ್ವಯಿಸುವುದಿಲ್ಲ. 28ರಿಂದ ನಾಡಿನ ಜನತೆಯ ಒಳಿತಿಗಾಗಿ ಆಚರಿಸುವ ಮೈಸೂರು ದಸರಾ ಉತ್ಸವ ಅರಂಭವಾಗುವ ಹಿನ್ನೆಲೆಯಲ್ಲಿ , ನಾಡಹಬ್ಬಕ್ಕೆ ಅಡ್ಡಿಯುಂಟು ಮಾಡಬಾರದೆಂದು ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಇಲ್ಲಿ ಮನವಿ ಮಾಡಿದರು.
28ರಂದು ಆರಂಭವಾಗುವ ತಾಯಿ ಚಾಮುಂಡೇಶ್ವರಿಯವರ ಪೂಜೆ - ಪುನಸ್ಕಾರಗಳಿಗೆ ಯಾವುದೇ ರೀತಿಯ ಆಡಚಣೆ ಉಂಟಾಗಬಾರದು. ನಾಡು ಹಾಗೂ ನಾಡಿನ ಜನರ ಶ್ರೇಯಸ್ಸಿಗಾಗಿ ಆಚರಿಸಲಾಗುವ ಈ ಉತ್ಸವಕ್ಕೆ ಚ್ಯುತಿಯಾಗಬಾರದು. ಈ ಹಿನ್ನೆಲೆಯಲ್ಲಿ 28ರಂದು ಅಪ್ಪಾಜಿ ಅವರ ಬಿಡುಗಡೆಗೆ ತಾಯಿ ಚಾಮುಂಡಾಂಬಿಕೆಯಲ್ಲಿ ನಾವೆಲ್ಲ ಪ್ರಾರ್ಥಿಸೋಣ. ಹಬ್ಬಕ್ಕೆ ಅಡ್ಡಿ ಮಾಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ರಾಜ್ಕುಮಾರ್ ಅವರ ಶೀಘ್ರ ಬಿಡುಗಡೆಗೆ ಒತ್ತಾಯಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ, ಕನ್ನಡ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಕರೆ, ಮೈಸೂರಿಗೆ ಮಾತ್ರ ಅನ್ವಯಿಸುವುದಿಲ್ಲ ಎಂಬುದನ್ನು ಇವರು ಸ್ಪಷ್ಟಪಡಿಸಿದರು. ಸೋಮವಾರ ನಡೆಯಲಿರುವ ಮೌನ ಮೆರವಣಿಗೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು, ಮಾತನಾಡುತ್ತಿದ್ದರು.
ಏನೇ ಆದರೂ, ಪರಂಪರಾನುಗತವಾಗಿ ನಡೆಸಿಕೊಂಡು ಬರುತ್ತಿರುವ ದಸರೆಗೆ ಅಡ್ಡಿಯಾಗಬಾರದು ಎಂದು 1994ರಲ್ಲಿ ದಸರೆ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ರಾಜ್ಕುಮಾರ್ ಹೇಳಿದ್ದ ಮಾತುಗಳನ್ನು ಶಿವರಾಜ್ಕುಮಾರ್ ಸ್ಮರಿಸಿದರು.