ರಾಜ್ ಬಿಡುಗಡೆಗೆ ಮೈಸೂರಿನಲ್ಲಿ ಯಶಸ್ವಿ ಮೌನ ಮೆರವಣಿಗೆ
ಮೈಸೂರು: ರಾಜ್ಕುಮಾರ್ ಶೀಘ್ರ ಬಿಡುಗಡೆಗೆ ಒತ್ತಾಯಿಸಿ ಮೈಸೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೌನ ಮೆರವಣಿಗೆ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಯಿತು. ಅರಮನೆಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಡಾ. ರಾಜ್ಕುಮಾರ್ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ನಗರದ ಪ್ರಮುಖ ರಸ್ತೆಗಳಲ್ಲಿ ಮೌನ ಮೆರವಣಿಗೆ ನಡೆಸಿದರು.
ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಜಯಂತಿ, ಸಾ.ರಾ. ಗೋವಿಂದು ಸೇರಿದಂತೆ ಹಲವಾರು ಚಲನಚಿತ್ರ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಚಿತ್ರಕರ್ಮಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಿನಿ ದಸರಾ ಮೆರವಣಿಗೆ : ಸುಮಾರು 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದ ಈ ಮೌನ ಮೆರವಣಿಗೆ ದಸರಾ ಮೆರವಣಿಗೆಯನ್ನು ಸ್ಮರಿಸುವಂತೆ ಮಾಡಿತು. ಇದನ್ನೊಂದು ಮಿನಿ ದಸರಾ ಮೆರವಣಿಗೆ ಎಂದರೂ ಅಡ್ಡಿಯಿಲ್ಲ. ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಸಲುವಾಗಿ ಸೆ.28ರಂದು ಕರ್ನಾಟಕ ಬಂದ್ಗೆ ಕರೆಕೊಡಲಾಗಿದ್ದು, ದಸರಾ ನಿಮಿತ್ತ ಮೈಸೂರಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.
ರಾಜ್ ಅಭಿಮಾನಿಗಳು ವೀರಪ್ಪನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಕುಮಾರ್ಗೆ ಜಯಕಾರ ಮೊಳಗಿತು. ರಾಜ್ ಬಿಡುಗಡೆಗೆ ಒತ್ತಾಯಿಸಿದ ನೂರಾರು ಫಲಕಗಳು ರಾರಾಜಿಸಿದವು. ಭಾನುವಾರ ಸಂಜೆ ಮೈಸೂರಿನಲ್ಲಿ ಈ ಸಂಬಂಧ ಪೂರ್ವಸಿದ್ಧತಾ ಸಭೆ ನಡೆಸಿದ್ದ ಡಾ. ರಾಜ್ಕುಮಾರ್ ಪುತ್ರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರುಗಳು ಕರ್ನಾಟಕ ಬಂದ್ ಮೈಸೂರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.