ಯಾರ ವಿರುದ್ಧ ಈ 28ರ ಕರ್ನಾಟಕ ಬಂದ್ ಹೇಳಬಲ್ಲಿರಾ ?
ಮಂಡ್ಯ : ಅಪ್ಪಾಜಿ ಅವರ ಅಪಹರಣವಾಗಿ ಇಂದಿಗೆ 57 ದಿನ ಕಳೆದಿದೆ. ಆದರೂ, ಅವರ ಬಿಡುಗಡೆಯ ಯಾವ ಸೂಚನೆಗಳೂ ಕಾಣುತ್ತಿಲ್ಲ. ಇದಕ್ಕಾಗಿಯೇ 28ರ ಕರ್ನಾಟಕ ಬಂದ್. ಈ ಬಂದ್ ಯಾರ ವಿರುದ್ಧವೂ ಅಲ್ಲ. ನಮ್ಮ ನೋವನ್ನು ಪ್ರಕಟಿಸಲಿಕ್ಕಾಗಿ ಮಾತ್ರ ಎಂದು ರಾಘವೇಂದ್ರ ರಾಜ್ಕುಮಾರ್ ಭಾನುವಾರ ಇಲ್ಲಿ ಹೇಳಿದರು.
ವರನಟ ಡಾ. ರಾಜ್ಕುಮಾರ್ ಅವರ ಅಪಹರಣದಿಂದ ಸಮಸ್ತ ಕನ್ನಡಿಗರಿಗೆ ಆಗಿರುವ ನೋವು ಈ ತಿಂಗಳ 28ರಂದು ಶಾಂತಿಯುತ ಬಂದ್ನೊಂದಿಗೆ ಪ್ರಕಟಗೊಳ್ಳಲಿದೆ ಎಂದು ಅವರು ಹೇಳಿದರು. ನಮ್ಮ ಈ ನೋವು ಕೇಂದ್ರಕ್ಕೂ ಮುಟ್ಟಿ , ಅಪ್ಪಾಜಿ ಅವರ ಬಿಡುಗಡೆಗೆ ಅವರೂ ಕಾರ್ಯೋನ್ಮುಖರಾಗಲಿ ಎಂದು ಬಂದ್ ಆಚರಿಸಲಾಗುತ್ತಿದೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಇಲ್ಲಿನ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಭಾನುವಾರ ಸಂಜೆ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವರನಟ ರಾಜ್ಕುಮಾರ್ ಅವರ ಪುತ್ರರು, ಗಲಾಟೆ ಮಾಡುವುದು ಕನ್ನಡಿಗರ ಉದ್ದೇಶವಾಗಿದ್ದರೆ, ಮೊದಲ ದಿನವೇ ಆಗುತ್ತಿತ್ತು. ನಾವು ಶಾಂತಿ ಪ್ರದರ್ಶಿಸಿದೆವು. ನಮ್ಮ ಶಾಂತಿ - ತಾಳ್ಮೆಯನ್ನೇ ಇವರು ಅಸಹಾಯಕತೆ ಎಂದು ಭಾವಿಸಿದಂತಿದೆ ಎಂದು ವಿಷಾದಿಸಿದರು.
ರಾಜ್ಕುಮಾರ್ ಅಪಹರಣದ ಹಿಂದೆ ಕಾಣದ (ರಾಜಕೀಯ) ಕೈಗಳ ಕೈವಾಡ ಇದೆ ಎಂದು ಸಾ.ರಾ. ಗೋವಿಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್, ಜಿಲ್ಲಾ ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಟಿ. ರವೀಂದ್ರಕುಮಾರ್, ಮಧು ಬಂಗಾರಪ್ಪ, ನಿರ್ದೇಶಕ ವಾಸು ಮುಂತಾದವರು ಪಾಲ್ಗೊಂಡಿದ್ದರು.