ಕನ್ನಡ ಸಾಫ್ಟ್ವೇರ್: ಏಕರೂಪ ತಂತ್ರಾಂಶ ಬಳಕೆ ದಿನ ದೂರವಿಲ್ಲ ?
ಬೆಂಗಳೂರು: ಸರಕಾರದ ನಿರ್ಧಾರ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಆದರೆ ನೀವಿನ್ನು ಕನ್ನಡ ಸಾಫ್ಟ್ವೇರ್(ತಂತ್ರಾಂಶ)ಗಳ ಗೊಂದಲದ ಜಗತ್ತಿನಿಂದ ಮುಕ್ತರಾಗುತ್ತೀರಿ.
ಈಗ ವಿವಿಧ ಕಂಪನಿಗಳು, ಪತ್ರಿಕೆಗಳು, ಸಣ್ಣ ಪುಟ್ಟ ಕಚೇರಿಗಳಲ್ಲೂ ಕಂಪ್ಯೂಟರ್ ಬಳಕೆಯಲ್ಲಿದ್ದು, ಅವುಗಳೆಲ್ಲಾ ವಿವಿಧ ಕನ್ನಡ ಸಾಫ್ಟ್ವೇರ್ಗಳನ್ನು ಬಳಸುತ್ತಿವೆ. ಅಷ್ಟೆಲ್ಲಾ ಏಕೆ ಕಂಪ್ಯೂಟರೀಕೃತ ಕೆಲವು ಸರಕಾರಿ ಕಚೇರಿಗಳಲ್ಲೇ ಏಕರೂಪದ ತಂತ್ರಾಂಶ ಬಳಕೆಯಲ್ಲಿಲ್ಲ. ಇದರಿಂದ ಅತಿ ವೇಗವಾಗಿ ಬೆಳೆಯುತ್ತಿರುವ ಇಂಟರ್ನೆಟ್ ಸೇರಿದಂತೆ ಕಂಪ್ಯೂಟರೀಕೃತ ಜಗತ್ತು ಹೆಚ್ಚು ಗೊಂದಲಕ್ಕೀಡುಮಾಡುತ್ತಿದೆ.
ಗೊಂದಲಗಳು ಇರುವುದಿಲ್ಲ : ಕಾಗದಪತ್ರಗಳನ್ನು ಮುದ್ರಿಸಿಕೊಂಡು ಆಡಳಿತ ನಡೆಸುವ ಸಂಸ್ಥೆಗಳಿಗೆ ಇದರಿಂದ ಹೆಚ್ಚೇನೂ ತೊಂದರೆಯಾಗುವುದಿಲ್ಲ . ಆದರೆ, ಅಲ್ಲಿ ಕೆಲಸ ಮಾಡುತ್ತಿರುವ ನೌಕರ ಬೇರೆಡೆ ಹೋದರೆ ಅಥವಾ ಬೇರೆ ಕಡೆಯಿಂದ ಇನ್ನೂಬ್ಬ ನೌಕರ ಬಂದರೆ ಮತ್ತೆ ಹೊಸ (ಈ ಕಚೇರಿಯಲ್ಲಿ ಬಳಸುತ್ತಿರುವ) ತಂತ್ರಾಂಶ ಕಲಿಯಬೇಕಾಗುತ್ತದೆ. ಇನ್ನೂ ದೊಡ್ಡ ಸಮಸ್ಯೆ ಇರುವುದು ಇಂಟರ್ನೆಟ್ನಲ್ಲಿ, ಒಂದು ಕನ್ನಡ ಸೈಟಿಗೊ ಅಥವಾ ಇನ್ನಾವುದೇ ಮಾಹಿತಿಗಾಗಿ ಇಂಟರ್ನೆಟ್ ಗುಂಡಿ ಒತ್ತಿದರೆ ನೀವು ಸಮಸ್ಯೆ ಎದುರಿಸುತ್ತೀರಿ. ಏಕೆಂದರೆ ನಿಮ್ಮ ಕಂಪ್ಯೂಟರ್ನಲ್ಲಿ, ನೀವು ಹೋಗಿರುವ ಸಂಬಂಧಪಟ್ಟ ಸೈಟಿನ ತಂತ್ರಾಂಶ ಇಲ್ಲದಿದ್ದಲ್ಲಿ ಅಲ್ಲಿರುವ ಮಾಹಿತಿಯನ್ನು ಓದಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಏಕರೂಪದ ತಂತ್ರಾಂಶ ಉಪಯೋಗಿಸುವುದರಿಂದ ನೀವು ಜಗತ್ತಿನ ಯಾವ ಮೂಲೆಯಲ್ಲಿ ಕುಳಿತು ಇನ್ನೊಂದು ಸೈಟಿನ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳದೆ ಓದಬಹುದು ಹಾಗೂ ಅಲ್ಲಿಂದಲೇ ವಿಷಯಗಳನ್ನು ಟೈಪ್ ಮಾಡಿ ಕಳಿಸಬಹುದು. ಇನ್ನೂ ವಿವರವಾಗಿ ಹೇಳಬೇಕೆಂದರೆ ಕನ್ನಡದಲ್ಲಿ ಸರಾಗವಾಗಿ ಇ-ಮೇಲ್ ಮಾಡಬಹುದು.
ಸಮಸ್ಯೆಯ ಶಾಶ್ವತ ನಿವಾರಣೆ: ಈಗಿರುವ ನಿಯಮದ ಪ್ರಕಾರ ನೀವು ಕನ್ನಡದಲ್ಲಿ ವಿಷಯವನ್ನು ಟೈಪ್ ಮಾಡಿ ಕಳಿಸಿದರೆ ಆತನ ಬಳಿ ನೀವು ಬಳಸಿರುವ ತಂತ್ರಾಂಶ ಇದ್ದರೆ ಮಾತ್ರ ಆತ ನಿಮ್ಮ ವಿಷಯವನ್ನು ಓದಲು ಸಾಧ್ಯ. ಕ್ರಿಪ್ರಗತಿಯಲ್ಲಿ ಸಾಗುತ್ತಿರುವ ಕಂಪ್ಯೂಟರೀಕೃತ ಜಗತ್ತಿನಲ್ಲಿ ಬಳಕೆದಾರರು ಜಾಸ್ತಿಯಾದಂತೆ ಏಕರೂಪ ತಂತ್ರಾಂಶ ಬಳಸದಿದ್ದರೆ ಗೊಂದಲಗಳು ಹೆಚ್ಚುತ್ತಲೇ ಹೋಗುತ್ತವೆ. ಆಡಳಿತಾತ್ಮಕವಾಗಿಯಂತೂ ತುಂಬಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಇಂಥ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಣೆ ಮಾಡಲು ಏಕರೂಪ ತಂತ್ರಾಂಶ ಬಳಕೆಯನ್ನು ಕಡ್ಡಾಯಗೊಳಿಸಲು ರಾಜ್ಯ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅ.ರಾ. ಚಂದ್ರಹಾಸಗುಪ್ತ ಅವರ ನೇತೃತ್ವದಲ್ಲಿ ಸಮಿತಿ ನೇಮಿಸಿತ್ತು. ಅನೇಕ ತಜ್ಞರ ಜೊತೆ ಚರ್ಚಿಸಿರುವ ಸಮಿತಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ಈ ಸಂಬಂಧ ಕನ್ನಡ ಗಣಕ ಪರಿಷತ್ತು ಇಂಗ್ಲಿಷ್ ಕೀಲಿಮಣಿ ಉಪಯಾಗಿಸಿಕೊಂಡು 26 ಗುಂಡಿಗಳನ್ನು ಬಳಸಿ ಕನ್ನಡ ಏಕರೂಪ ತಂತ್ರಾಂಶ ಆದೇಶ: ಅಕ್ಷರಗಳನ್ನು ಟೈಪು ಮಾಡುವ ಪರಿಹಾರ ಸೂಚಿಸಿದೆ. ಹಾಗಾಗಿ ಎಲ್ಲ ಗೊಂದಲಗಳನ್ನು ನಿವಾರಿಸಲು ತಂತ್ರಾಂಶ ತಯಾರಕರು ಏಕರೂಪದ ಸಂಕೇತ ಬಳಸುವಂತೆ ಆದೇಶ ನೀಡಬೇಕೆಂದು ಸಮಿತಿ, ಸರಕಾರಕ್ಕೆ ಶಿಫಾರಸು ಮಾಡಿದೆ.
ಕನ್ನಡದಲ್ಲಿ ಏಕರೂಪ ತಂತ್ರಾಂಶ ಬಳಸಲು ನಿರ್ಧರಿಸಿರುವುದನ್ನು ಮೆಚ್ಚಿಕೊಂಡಿರುವ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ಗೇಟ್ಸ್, ತಮ್ಮ ವಿಂಡೋಸ್ನಲ್ಲಿ ಈ ಲಿಪಿಯನ್ನು ಅಳವಡಿಸಲು ಒಪ್ಪಿದ್ದಾರೆ ಎಂದು ಸಮಿತಿ ಅಧ್ಯಕ್ಷ ಚಂದ್ರಹಾಸಗುಪ್ತ ತಿಳಿಸಿದ್ದಾರೆ. ಇಷ್ಟಕ್ಕೂ ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕಷ್ಟೆ ಒಂದೇ ತಂತ್ರಾಂಶ ಬಳಸುವಂತೆ ಎಲ್ಲರ ಮನವೊಲಿಸಬೇಕು ಇಲ್ಲದಿದ್ದರೆ ಶಾಸನ ಮಾಡಬೇಕು ಹಾಗಾಗದಿದ್ದರೆ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಶೇಕಡಾ 100ರಷ್ಟು ಬಳಸಬೇಕೆಂಬ ಕನಸು ನನಸಾಗುವುದು ಕಷ್ಟ.
(ಇನ್ಫೋ ವಾರ್ತೆ)