500 ಬೆಂಬಲಿಗರೊಂದಿಗೆ ನಾಳೆ ಕಾಡಿಗೆ ಹೋಗುತ್ತಾರಂತೆ ರಮೇಶ್
ಬೆಂಗಳೂರು : ಸ್ವಾತಂತ್ರ್ಯ ಯೋಧರು, ಶಾಲಾ ಬಾಲಕರು, ರಾಜ್ ಅಭಿಮಾನಿಗಳು ವೀರಪ್ಪನ್ ವಶದಿಂದ ಡಾ. ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗುವ ವಿಫಲ ಯತ್ನ ಮಾಡಿದ್ದು, ನಿಮಗೂ ಗೊತ್ತಲ್ಲ. ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗಲು ತಾವೂ ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ತಾರೆ ಹಾಗೂ ಸಂಸತ್ ಸದಸ್ಯೆ ಜಯಪ್ರದಾ ಹಾಯಾಗಿ ಅಮೆರಿಕಕ್ಕೆ ಹೋಗಿದ್ದೂ ಇತಿಹಾಸ.
ಈಗ ಅದೇ ರೀತಿಯ ಹೇಳಿಕೆಯನ್ನು ಮಾಜಿ ಸಚಿವ ಎಸ್. ರಮೇಶ್ ಶುಕ್ರವಾರ ನೀಡಿದ್ದಾರೆ. ತಮ್ಮ 500 ಮಂದಿ ಬೆಂಬಲಿಗರೊಂದಿಗೆ ಮೌನ ಮೆರವಣಿಗೆಯಲ್ಲಿ ಶನಿವಾರ ಕಾಡಿಗೆ ಹೋಗುವ ಸಾಹಸವನ್ನು ತಾವು ಮಾಡುತ್ತಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಮೇಶ್ ಕೇವಲ ಮಾಜಿ ಸಚಿವರಷ್ಟೇ ಅಲ್ಲ. ಚಲನಚಿತ್ರ ನಿರ್ಮಾಪಕರು, ವಿತರಕರು. ಮಿಗಿಲಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಕಾಲ ಅಲ್ಲೂ ರಾಜಕೀಯ ಮಾಡಿದವರು. ಕಳೆದ 54 ದಿನದಿಂದ ಸುಮ್ಮನ್ನಿದ್ದ ಇವರು ಈಗ ಇದ್ದಕ್ಕಿದ್ದಂತೆ ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ತಮ್ಮ ಬೆಂಬಲಿಗರೊಂದಿಗೆ ಕಾಡಿಗೆ ಹೊರಡುವ ನಿರ್ಧಾರ ಕೈಗೊಂಡಿರುವುದು ಎಲ್ಲರ ಹುಬ್ಬೇರಿಸಿದೆ.
ಕಾಡಿಗೆ ಹೋಗುವುದಾಗಿ ಹೇಳಿಕೆ ಕೊಟ್ಟಿದ್ದ ರಜನಿಕಾಂತ್, ಜಯಪ್ರದಾ, ಅಂಬರೀಶ್ ಎಲ್ಲರೂ ನಾಡಿನಲ್ಲಿ ಹಾಯಾಗಿರುವಾಗ ಗೋಪಾಲ್ ಮಾತ್ರ ಹೆಗಡೆ ಅವರು ಹೇಳಿದಂತೆ ಬಚ್ಚಲು ಮನೆಗೆ ಹೋದಂತೆ ಪದೇ ಪದೇ ಕಾಡಿಗೆ ಹೋಗುತ್ತಿದ್ದಾರೆ. ರಮೇಶ್ ಅವರು ಗೋಪಾಲ್ಗೆ ಕಂಪನಿ ಕೊಡುತ್ತಾರೇನೋ ಕಾದು ನೋಡೋಣ.