ಕೃಷ್ಣ ಅವರ ವರ್ಷದ ಹರ್ಷ ಕಿತ್ತುಕೊಳ್ಳುವನೆ ವೀರಪ್ಪನ್ ?
ಬೆಂಗಳೂರು:ಅಕ್ಟೋಬರ್ 11ಕ್ಕೆ ಕೃಷ್ಣ ಸರಕಾರಕ್ಕೆ ಒಂದು ವರ್ಷ ತುಂಬುತ್ತಿದೆ. ಅದೇ ದಿನ ಸುಪ್ರೀಂ ಕೋರ್ಟ್ನಲ್ಲಿ 51 ಟಾಡಾ ಆರೋಪಿಗಳ ಬಿಡುಗಡೆ ಕುರಿತು ವಿಚಾರಣೆ ನಡೆಯಲಿದೆ. ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ನಿಗದಿಪಡಿಸಿದ್ದರಿಂದ, ರಾಜ್ ಬಿಡುಗಡೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಒಂದು ವರ್ಷ ಪೂರೈಸಿದ ಸಂಭ್ರಮವನ್ನು ಹಂಚಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ವರ್ಷದ ಸಂತೋಷಕ್ಕೆ ವೀರಪ್ಪನ್ ಪ್ರಕರಣ ಅಡ್ಡಗಾಲಾಗಿದೆ.
ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಕೃಷ್ಣ ಸರಕಾರಕ್ಕೆ ಅಪಹರಣ ಪ್ರಕರಣ ಮಂಕು ಕವಿಸಿದೆ. ಸರಕಾರ ಒಂದು ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲು- ಅನುಭವಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂದು ಹಿರಿಯ ಸಚಿವರೊಬ್ಬರು ಅಲವತ್ತುಕೊಂಡಿದ್ದಾರೆ.
ಹೂಡಿಕೆ ಕ್ಷೇತ್ರದ ಸಾಧನೆ: ಸರಕಾರ ನೂರು ದಿನ ಪೂರೈಸಿದಾಗ ಈ ಸಂಬಂಧ ಯಾವುದೇ ಕಾರ್ಯಕ್ರಮ ಆಚರಿಸಲು ಕೃಷ್ಣ ಇಚ್ಛಿಸಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಾಹಿತಿ ತಂತ್ರಜ್ಞಾನದ ವಕ್ತಾರರಂತೆ ಕಾಣುತ್ತಿದ್ದ ಕೃಷ್ಣರಿಗೆ, ಪಂಚಾಯ್ತಿ ಚುನಾವಣೆಗಳಲ್ಲಿ ದೊರೆತ ಅಭೂತಪೂರ್ವ ಯಶಸ್ಸು, ಭೀಮ ಬಲವನ್ನು ತಂದುಕೊಟ್ಟಿತೆಂದೇ ಹೇಳಬೇಕು. ಮಾಹಿತಿ ತಂತ್ರಜ್ಞಾನ ಸೇರಿದಂತೆ ಕೃಷ್ಣ ಅವರು ಹೂಡಿಕೆಗೆ ನೀಡಿದ್ದ ಮಹತ್ವ ಎಲ್ಲಿವರೆಗೆ ಬಂತು ಎಂದರೆ ಸುಮಾರು 270 ಬಿಲಿಯನ್ ರುಪಾಯಿಗಳಿಗಿಂತ ಹೆಚ್ಚು ಎನ್ನುವವರಿದ್ದಾರೆ. ಈ ಸಾಧನೆ ದಾಖಲೆ ಮಟ್ಟದ್ದು ಎನ್ನಲಾಗುತ್ತಿದೆ.
ಜನತಾದಳ ಸರಕಾರ 5 ವರ್ಷಗಳಲ್ಲಿ ಮಾಡಿದ್ದನ್ನು ಕೃಷ್ಣ ಒಂದು ವರ್ಷದಲ್ಲಿ ಸಾಧಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಜನತಾ ದಳ (ಯು)ನ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಬುಧವಾರದಿಂದ ಪ್ರಾರಂಭವಾಗಲಿರುವ ಗೋಪಾಲ್ ಅವರ ನಾಲ್ಕನೆ ಸಂಧಾನ ಯಾತ್ರೆಯ ಫಲಶೃತಿ ಏನಾಗಬಹುದೆಂಬ ಬಗ್ಗೆ ಯಾರಿಗೂ ಖಚಿತ ಅಭಿಪ್ರಾಯವಿಲ್ಲ . ಹಾಗಾಗಿ ವರ್ಷದ ಸಂತೋಷಕೂಟಕ್ಕೆ ಯಾವುದೇ ಸಿದ್ಧತೆಗಳಿಲ್ಲ. ಅಂದು (ಅ.11) ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ ಎಂಬುದು ಎಲ್ಲ ಕಾರಣಕ್ಕೂ ಮುಖ್ಯವಾಗಿದೆ.
ವರಿಷ್ಠರಿಗೆ ದೂರು: ಈ ಮಧ್ಯೆ ರಾಜ್ ಬಿಡುಗಡೆಗೆ ಸಂಬಂಧಿಸಿದಂತೆ ಕೃಷ್ಣ ಅವರ ಮೇಲೆ ಎಲ್ಲ ರೀತಿಯ ಒತ್ತಡಗಳೂ ಹೆಚ್ಚಾಗುತ್ತಲೇ ಇವೆ. ರಾಜಕೀಯವಾಗಿ ವರಿಷ್ಠರವರೆಗೆ ದೂರು ಒಯ್ದಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಸರಾಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಕಾರ್ಯಕಾರಿ ಸಮಿತಿ ಮುಂದೆ ದೂರನ್ನು ಮಂಡಿಸಿದ್ದಾರೆ.
ರಾಜ್ ಅವರ ಪುತ್ರ ಶಿವರಾಜ್ ಅವರ ಹೆಂಡತಿಯ ತಂದೆಯೂ ಆಗಿರುವ ಬಂಗಾರಪ್ಪ ಅವರು, ಸುಪ್ರೀಂಕೋರ್ಟ್ನಿಂದ ಮೊದಲ ಬಾರಿಗೆ ವಿಚಾರಣೆ ನಡೆಯುವ ಮುಂಚೆ, ಬಂದಿತರ ಬಗೆಗೆ ಕೋರ್ಟ್ಗೆ ನೀಡಬೇಕಾದ ಖಾತರಿ ಮತ್ತು ಜಾಮೀನು ಹಣ ಸೇರಿದಂತೆ ಎಲ್ಲ ಕಾನೂನು ಕ್ರಮಗಳನ್ನು ತ್ವರಿತಗೊಳಿಸಬೇಕೆಂದು ಹೇಳಿದ್ದರು.
ಈ ಸಂಬಂಧ ಸೋನಿಯಾ ಅವರನ್ನು ಬಂಗಾರಪ್ಪ ಭೇಟಿ ಮಾಡಿ ಬಂದ ಮರುದಿನವೇ ಸೋನಿಯಾ ಅವರನ್ನು ಭೇಟಿ ಮಾಡಿದ ಕೃಷ್ಣ ಅವರು ಬಂಗಾರಪ್ಪನವರ ತಕರಾರನ್ನು ತಣ್ಣಗಾಗಿಸಿದರು.
ಸಂಧಾನರಹಿತ ಷರತ್ತುಗಳು: ಬಂಗಾರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗಲೇ ನಡೆದ ಕಾವೇರಿ ಗಲಭೆಯಿಂದ ನೂರಾರು ತಮಿಳರು ಕರ್ನಾಟಕ ಬಿಟ್ಟು ಹೋಗಿದ್ದರು. ಆ ಗಲಭೆಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಮತ್ತು ಮೈಸೂರಿನ ಜೈಲಿನಲ್ಲಿರುವ 51 ಟಾಡಾ ಬಂದಿಗಳನ್ನು ಬಿಡುಗಡೆ ಮಾಡಬೇಕೆಂಬುದು ವೀರಪ್ಪನ್ನ ಸಂಧಾನರಹಿತ ಷರತ್ತುಗಳಾಗಿರುವುದು, ರಾಜ್ಯ ಸರಕಾರ ಮತ್ತು ಜನರ ತಳಮಳವನ್ನು ಹೆಚ್ಚಿಸಿವೆ. ಸಂತ್ರಸ್ತರ ಪರಿಹಾರಕ್ಕೆ ಒಪ್ಪಲಾಗಿದ್ದು, ಉಳಿದ ಎಲ್ಲವೂ ಸುಪ್ರೀಂಕೋರ್ಟ್ನ ತೀರ್ಪಿನ ಮೇಲೆ ನಿಂತಿದೆ. ಇಂಥ ಎಲ್ಲ ಕಾನೂನು ಪ್ರಕ್ರಿಯೆಗಳ ಸಹಜ ವಿಳಂಬವನ್ನು ವೀರಪ್ಪನ್ಗೆ ಮನದಟ್ಟು ಮಾಡಿಕೊಟ್ಟು, ಮನವೊಲಿಸುವಲ್ಲಿ ಗೋಪಾಲ್ ಯಶಸ್ವಿಯಾದರೆ ಅಕ್ಟೋಬರ್ 11 ಕೃಷ್ಣ ಸರಕಾರದ ಮೊದಲ ಹಬ್ಬಕ್ಕೆ ಕಂಟಕವಿರಲಾರದು ಎಂದು ಧಾರಾಳವಾಗಿ ಹೇಳಬಹುದು.
(ಐಎಎನ್ಎಸ್)