ಭಾರತಕ್ಕೆ ಅಧ್ಯಕ್ಷೀಯ ಸರಕಾರ ಬೇಕೆ?
ಆಕ್ಸ್ಫರ್ಡ್ : ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳ ನಡುವೆ ಪ್ರತ್ಯೇಕ ಅಧಿಕಾರವಿರುವ ಅಧ್ಯಕ್ಷೀಯ ಮಾದರಿ ಸರಕಾರವನ್ನು ಭಾರತ ಅಳವಡಿಸಿಕೊಳ್ಳಬೇಕೆಂದು ಭಾರತೀಯ ಮೂಲದ, ಬ್ರಿಟಿಷ್ ಲೇಬರ್ ಪಕ್ಷದ ಸದಸ್ಯ ಹಾಗೂ ಸಂಶೋಧಕ ಲಾರ್ಡ್ ಮೆಗಾಂಡ್ ದೇಸಾಯಿ ಹೇಳಿದ್ದಾರೆ.
ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿರುವ ಜಾಗತಿಕ ಆಡಳಿತ ವಿಭಾಗದ ನಿರ್ದೇಶಕರೂ ಆಗಿರುವ ದೇಸಾಯಿ, ಕಳೆದ ಭಾನುವಾರ ಆಕ್ಸ್ಫರ್ಡ್ನಲ್ಲಿ ಫೋರ್ಡ್ ಫೌಂಡೇಷನ್ ಆಯೋಜಿಸಿದ್ದ , ‘ಭಾರತದಲ್ಲಿ ರಾಜಕೀಯ ಸುಧಾರಣೆಗಳು’ ಎಂಬ ವಿಷಯವಾಗಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಧಿಕಾರ ವಿಕೇಂದ್ರೀಕರಣಕ್ಕೆ ಎಲ್ಲ ವರ್ಗದ ಜನರ ಸೂಕ್ತ ಅನುಪಾತವಿರುವ ಪ್ರಾತಿನಿಧ್ಯ ಅಗತ್ಯ ಎಂದಿರುವ ದೇಸಾಯಿ, ಅಧ್ಯಕ್ಷೀಯ ಸರಕಾರ ಅಮೆರಿಕದ ಮಾದರಿಯಲ್ಲಿ ಇರಬೇಕು ಎಂದಿದ್ದಾರೆ.
ಭಾರತ ಸಂವಿಧಾನದ ಪುನರ್ವಿಮರ್ಶೆಯ ಬಗ್ಗೆಯೂ ಮಾತನಾಡಿರುವ ಅವರು ಅಧಿಕಾರ ಕೇಂದ್ರೀಕರಣಗೊಳ್ಳುವುದನ್ನು ತಪ್ಪಿಸಿ, ಸಾಮಾನ್ಯ ಜನರಿಗೆ ಎಲ್ಲ ವಿಷಯಗಳೂ ಪಾರದರ್ಶಕವಾಗಿರಲು ಕಾರ್ಯಾಂಗದ ಅಧಿಕಾರಕ್ಕೆ ಮಿತಿಹಾಕಿಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವ ವಿಫಲ : ವಿವಿಧ ಹಂತದ ಆಡಳಿತ ವ್ಯವಸ್ಥೆ ಅಸಮಾನತೆ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಇದರಿಂದ ಬಡವರಿಗೆ ಅನೇಕ ಸವಲತ್ತುಗಳು ತಲುಪುತ್ತಿಲ್ಲ. ಹಾಗೆಯೇ ಭಾರತೀಯ ನಾಯಕತ್ವ ಭಾರತೀಯ ಬಡವರ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ ಪುನರ್ಪರಿಶೀಲನೆ ವಿಷಯವಾಗಿ ಭಾರತದಲ್ಲಿ ಈಗ ವಾದ-ವಿವಾದಗಳೇ ನಡೆಯುತ್ತಿವೆ. ಪುನರ್ಪರಿಶೀಲನೆಯನ್ನು ಬೆಂಬಲಿಸುತ್ತಿರುವವರು ತಮ್ಮ ಗುಪ್ತ ಕಾರ್ಯ ನೀತಿಯನ್ನು ಹೇರಲು ಹವಣಿಸುತ್ತಿದ್ದಾರೆ ಎಂದು ಇತರರು ಅನುಮಾನಿಸುತ್ತಿರುವುದು ವಾಗ್ಯುದ್ಧಕ್ಕೆ ಪ್ರಮುಖ ಕಾರಣವಾಗಿದೆ.
ಸಂವಿಧಾನದ ಜಾತ್ಯತೀತ ಪರಿಕಲ್ಪನೆ ಮತ್ತು ರಾಜಕೀಯ ನಿಲುವಿಗೆ ಸಂವಿಧಾನ ಪುನರ್ಪರಿಶೀಲನೆಯಿಂದ ದಕ್ಕೆಯಾಗಬಹುದು ಅದರಲ್ಲೂ ಹಿಂದುತ್ವ ವಾದಿಗಳ ಬಗ್ಗೆ ಜಾತ್ಯತೀತವಾಗಿ ಯೋಚಿಸುವ ಜನ ಹೆಚ್ಚು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನೊಂದು ದೃಷ್ಟಿಕೋನದಿಂದ ಮಾತನಾಡಿರುವ ದೇಸಾಯಿ, ಕಳೆದ 53 ವರ್ಷಗಳಿಂದ ಜಾರಿಯಲ್ಲಿರುವ ಸಂವಿಧಾನ ಪುನಾಪರಿಶೀಲನೆಗೆ ಏಕೆ ಅಷ್ಟೊಂದು ವಿರೋಧ ವ್ಯಕ್ತವಾಗುತ್ತಿದೆ? ಬಿಜೆಪಿ ಅಧಿಕಾರಕ್ಕೆ ಬಂದಾಗ ತಮ್ಮ ಅನೇಕ ಭಾರತೀಯ ಮಿತ್ರರು, ಭಾರತೀಯ ಸಂವಿಧಾನ ಮತ್ತು ಜಾತ್ಯತೀತತೆಗೆ ಬೆದರಿಕೆ ಉಂಟಾಗಿದೆ ಎಂದು ತಮ್ಮೊಂದಿಗೆ ಹೇಳಿಕೊಂಡದ್ದಾಗಿ ದೇಸಾಯಿ ಹೇಳಿದ್ದಾರೆ.
(ಐಎಎನ್ಎಸ್)