ಎಚ್ಎಂಟಿಯ ಯಾವುದೇ ಘಟಕಗಳನ್ನು ಮುಚ್ಚುವುದಿಲ್ಲ -ಜೋಶಿ
ಬೆಂಗಳೂರು: ಕೇಂದ್ರ ಸರಕಾರ ನೀಡುವ ನೆರವನ್ನು ಬಳಸಿಕೊಂಡು ಸಾರ್ವಜನಿಕ ವಲಯದ ಪ್ರತಿಷ್ಠಿತ ಉದ್ದಿಮೆ ಎಚ್.ಎಂ.ಟಿ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಲಾಭದಾಯಕ ಉದ್ದಿಮೆಯಾಗಿ ರೂಪುಗೊಳ್ಳಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಸಚಿವ ಮನೋಹರ ಜೋಶಿ ಮಂಗಳವಾರ ಹೇಳಿದ್ದಾರೆ.
ಪ್ರತಿಷ್ಠಿತ ಎಚ್ಎಂಟಿ ಕಾರ್ಖಾನೆಯ ಅಭಿವೃದ್ಧಿಗಾಗಿ ಕೇಂದ್ರ ಸಂಪುಟ ಅನುಮೋದಿಸಿರುವ 1,150 ಕೋಟಿ ರೂಪಾಯಿಗಳ ಯೋಜನೆಯ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, ಎಚ್.ಎಂ.ಟಿ. ಕಾರ್ಖಾನೆಯ ನಷ್ಟದಲ್ಲಿರುವ ಯಾವುದೇ ಘಟಕಗಳನ್ನು ಮಾರುವ ಉದ್ದೇಶ ಕೇಂದ್ರ ಸರಕಾರಕ್ಕೆ ಇಲ್ಲ ಎಂದರು. ಶ್ರೀನಗರದ ವಾಚ್ ಫ್ಯಾಕ್ಟರಿ, ಯಂತ್ರಗಳ ಬಿಡಿ ಭಾಗಗಳು ಹಾಗೂ ವಾಚ್ಗೆ ಸಂಬಂಧಿಸಿದಂತೆ ಪ್ರತ್ಯೇಕ ಘಟಕವನ್ನು ಅಭಿವೃದ್ಧಿ ಗೊಳಿಸಲಾಗುವ ಯೋಜನೆಯೂ ಸರ್ಕಾರಕ್ಕಿದೆ ಎಂದರು.
ಮುಂದಿನ ಕೆಲವೇ ವರ್ಷಗಳಲ್ಲಿ , ಈ ಘಟಕದ ಸಹಯೋಗದೊಂದಿಗೆ 250 ಕೋಟಿ ರೂಪಾಯಿ ಕಂಪೆನಿಯ ಕೈ ಸೇರಲಿದೆ. ಅನುತ್ಪಾದಕ ಆಸ್ತಿಯ ಮಾರಾಟದಿಂದಲೇ 220 ಕೋಟಿ ರೂಪಾಯಿಗಳನ್ನು ಕಂಪನಿ ನಿರೀಕ್ಷಿಸುತ್ತಿದೆ ಎಂದರು. ಕಾರ್ಖಾನೆಯ ಅಭಿವೃದ್ಧಿಗೆ ಕೈಗೊಂಡಿರುವ ಪಂಚವಾರ್ಷಿಕ ಯೋಜನೆ ಸಂಪೂರ್ಣವಾಗಿ ಕಾರ್ಯಗತವಾದ ನಂತರ ಕಾರ್ಖಾನೆಯ ವಹಿವಾಟು ಶೇ. 51ರಷ್ಟು ಹೆಚ್ಚಲಿರುವುದೇ ಅಲ್ಲದೆ, ಕಾರ್ಮಿಕರ ಮೇಲೆ ಮಾಡಲಾಗುತ್ತಿರುವ ವೆಚ್ಚ ಶೇ. 29.5 ರಿಂದ ಶೇ. 17.4ಕ್ಕೆ ಇಳಿಯಲಿದೆ ಎಂದರು.
ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯಗಳಿಗೆ ತಮ್ಮ ಖರೀದಿಯನ್ನು ಹೆಚ್ಚಿಸುವಂತೆ ಕೇಳಿಕೊಳ್ಳುವುದೇ ಅಲ್ಲದೆ ಸರಕಾರಿ ಒಡೆತನದ ಕಂಪನಿಗಳಿಂದ ಬರಬೇಕಿರುವ ಬಾಕಿಯ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಉದ್ದೇಶಿದ ಪುನಶ್ಚೇತನ ಯೋಜನೆಯು ಹೊಸತಾಗಿ ಸಂಗ್ರಹಿಸುವ 250 ಕೋಟಿ ರುಪಾಯಿಗಳ ಈಕ್ವಿಟಿಯನ್ನೂ ಒಳಗೊಂಡಿರುತ್ತದೆ ಎಂದರು.
(ಯುಎ-ನ್-ಐ)