ಪ್ರತ್ಯೇಕತೆಯ ಕೂಗಿನ ಬಗ್ಗೆ ಅನಂತ ಶರ್ಮಾ ಎಚ್ಚರಿಕೆ
ಗುಲ್ಬರ್ಗಾ : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲೇ ಆದರೂ ಹೈದರಾಬಾದ್ ಕರ್ನಾಟಕಕ್ಕೆ ನಿಜಾಮರಿಂದ ಸ್ವಾತಂತ್ರ್ಯ ದೊರೆತಿದ್ದು 1948ರ ಸೆಪ್ಟೆಂಬರ್ 17ರಂದು. ಈ ವಿಮೋಚನೆಯ ಉತ್ಸವವನ್ನು ಇಲ್ಲಿನ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಅಖಂಡ ಕರ್ನಾಟಕದ ಏಕತೆಗೆ ಪೆಟ್ಟು ಬೀಳುವಂತ ಕೂಗು ಹೈಕೋರ್ಟ್ ಪೀಠದ ಹೆಸರಿನಲ್ಲಿ ಕೇಳಿ ಬಂದ ಬಗ್ಗೆ 52ನೇ ವಿಮೋಚನಾ ಉತ್ಸವದಲ್ಲಿ ಕಳವಳ ವ್ಯಕ್ತವಾಯಿತು. ಏಕೀಕರಣಾನಂತರ ಅದೂ ನಾಲ್ಕು ದಶಕಗಳಾದ ಮೇಲೆ ಪ್ರತ್ಯೇಕತೆಯ ಕೂಗು ಕೇಳಿ ಬಂದಿದೆ. ಈ ಕೂಗು ದಳ್ಳುರಿಯಾಗಿ ರಾಜ್ಯವನ್ನು ಸುಡುವ ಮೊದಲೇ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹಿರಿಯ ಸ್ವಾತಂತ್ರ್ಯ ಸೇನಾನಿ ಅನಂತ ಶರ್ಮಾ ಅವರು ಎಚ್ಚರಿಕೆ ನೀಡಿದರು.
ಏಕೀಕರಣಾನಂತರ ರಾಜ್ಯ ಸರಕಾರ ಎಲ್ಲ ಭಾಗಗಳ ಅಭಿವೃದ್ಧಿಗೂ ಸಮಾನ ಮನ್ನಣೆ ನೀಡಲಿಲ್ಲ. ಎಲ್ಲ ಭಾಗದಲ್ಲೂ ಶಿಕ್ಷಣ, ಆರೋಗ್ಯ, ಉದ್ಯೋಗವೇ ಮುಂತಾದ ಮೂಲಭೂತ ಸೌಕರ್ಯಗಳು ದೊರಕಿದೆಯೇ ಎಂಬ ಬಗ್ಗೆ ಕಾಳಜಿ ವಹಿಸಲಿಲ್ಲ. ಇದುವೇ ಇಂದು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಅಸಮಾಧಾನದ ಹೊಗೆ ಆಡಲು ಮೂಲ ಕಾರಣವಾಗಿದೆ ಎಂದು ಅವರು ಹೇಳಿದರು.
ಪ್ರಥಮ ಬಾರಿಗೆ ಸರಕಾರವೇ ತನ್ನ ಖರ್ಚಿನಲ್ಲೇ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಉತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕುಸುಮಾಕರ ದೇಸಾಯಿ, ಜಿ.ಪಂ. ಅಧ್ಯಕ್ಷ ಅಲ್ಲಮಪ್ರಭು ಪಾಟೀಲ್, ಮಾಜಿ ಸಂಸದ ಡಾ. ಬಿ.ಜಿ. ಜವಳಿ, ಶಶಿಲ್ ನಮೋಶಿ, ಮಾರುತಿ ಪವಾರ್, ಅಮರನಾಥ ಪಾಟೀಳ್, ಸುರೇಶ್ ನಂದ್ಯಾಳ ಮತ್ತಿತರರು ಪಾಲ್ಗೊಂಡಿದ್ದರು.
ಮುಖಪುಟ / ಊರು ಕೇರಿ