ಆಸ್ನೋಟಿಕರ್ ಹತ್ಯೆ: ದಿಲೀಪ್ ನಾಯ್ಕನಿಗೆ ಜಾಮೀನು ನಿರಾಕರಣೆ
ಕಾರವಾರ : ಶಾಸಕ ವಸಂತ ಆಸ್ನೋಟಿಕರ್ ಹತ್ಯಾ ಪ್ರಕರಣದ ಪ್ರಮುಖ ಸಂಚುದಾರ ಎಂಬ ಆರೋಪ ಎದುರಿಸುತ್ತಿರುವ ದಿಲೀಪ್ ಅರ್ಜುನ ನಾಯ್ಕನಿಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ದಿಲೀಪ್ ನಾಯ್ಕನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಜಿ.ಎಸ್.ಎಸ್. ಖಾದ್ರಿ ಅವರು, ಸೋಮವಾರ ಸಂಜೆ ನೀಡಿದ ತಮ್ಮ ತೀರ್ಪಿನಲ್ಲಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಸಂತ್ ಆಸ್ನೋಟಿಕರ್ ಹಾಗೂ ಆರೋಪಿ ದಿಲೀಪ್ ನಾಯ್ಕ ನಡುವೆ ಮೊದಲಿನಿಂದಲೂ ವೈಷಮ್ಯವಿರುವುದು ಖಚಿತಪಟ್ಟಿದೆ. ಹತ್ಯೆಯ ಸಂಚಿನಲ್ಲಿ ದಿಲೀಪ್ ನಾಯ್ಕ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ದಿಲೀಪ್ ನಾಯ್ಕ ಜಾಮೀನಿನ ಮೇಲೆ ಬಿಡುಗಡೆಯಾದರೆ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂಬ ವಾದವನ್ನು ಪುರಸ್ಕರಿಸಿ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಹತ್ಯೆಗೆ ಬಳಸಲಾದ ಆಯುಧ, ವಾಹನಗಳೂ ಸೇರಿದಂತೆ ಹಂತಕರನ್ನು ಇನ್ನೂ ಬಂಧಿಸಿಲ್ಲದ ಕಾರಣ ತನಿಖೆಯೂ ಪೂರ್ಣಗೊಂಡಿಲ್ಲ. ಈ ಸಂಬಂಧ ಅರ್ಜಿದಾರರ ಪರ ವಕೀಲರ ವಾದಕ್ಕೆ ನ್ಯಾಯಮೂರ್ತಿಗಳು ಮನ್ನಣೆ ನೀಡಿಲ್ಲ. ಅರ್ಜಿದಾರರ ಪರ ವಕೀಲ ಶಂಕರಪ್ಪ ವಾದಿಸಿದರೆ, ಸಿಓಡಿ ಪರ ಬೆಂಗಳೂರಿನ ನ್ಯಾಯವಾದಿ ನಂಜುಂಡಯ್ಯ ವಾದ ಮಂಡಿಸಿದರು.
ಪ್ರಾಥಮಿಕ ತನಿಖೆಯ ತರುವಾಯ ಸಿಓಡಿ ತನಿಖಾದಳ ಸೆ.1ರಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಆ ಬಳಿಕ ದಿಲೀಪ್ನಾಯ್ಕ ಮೊದಲ ಬಾರಿಗೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಮುನ್ನ ಏಪ್ರಿಲ್ 6ರಂದು ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಆತ ಸಲ್ಲಿಸಿದ್ದ, ಎರಡೂ ಕಡೆಯೂ ಅರ್ಜಿ ತಿರಸ್ಕೃತಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಶಾಸಕ ವಸಂತ ಆಸ್ನೋಟಿಕರ್, ಫೆ.19ರ ರಾತ್ರಿ ತಮ್ಮ ಮಗಳ ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ಓಡಾಡುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಹಂತಕರಿಬ್ಬರು ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿ.ಓ.ಡಿ.ಗೆ ಒಪ್ಪಿಸಲಾಗಿತ್ತು.