ಪರಿಸರ ಅಧ್ಯಯನದ ಸುಳ್ಳು ವರದಿ : ಸೂಕ್ತ ಕ್ರಮಕ್ಕೆ ಆಗ್ರಹ
ಕಾರವಾರ :ಜೋಯಿಡಾ ತಾಲೂಕಿನ ಮಾವಳಂಗಿ ಎಂಬಲ್ಲಿ ನಿರ್ಮಿಸಲಾಗುತ್ತಿರುವ ದಾಂಡೇಲಿ ಕಿರು ಜಲ ವಿದ್ಯುತ್ ಯೋಜನೆಗೆಂದು ಸಿದ್ಧ ಪಡಿಸಲಾಗಿರುವ ಪರಿಸರ ಅಧ್ಯಯನ ವರದಿ ಸುಳ್ಳೆಂದು ಸಾಬೀತಾಗಿದ್ದು, ಈ ಮೂಲಕ ಸರಕಾರ ಹಾಗೂ ಸಾರ್ವಜನಿಕರನ್ನು ವಂಚಿಸಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೋಯಿಡಾ ತಾಲೂಕಿನ ಭಾರತೀಯ ಜನತಾ ಪಾರ್ಟಿ ಆಗ್ರಹಿಸಿದೆ.
ಮೂಲಭೂತ ಅಂಶಗಳೇ ತಪ್ಪಾಗಿದ್ದರೂ ಈ ಯೋಜನೆಯನ್ನು ಸಾರ್ವಜನಿಕರ ವಿಚಾರಣೆ ಹಂತದವರೆಗೆ ತರಲು ಕಾರಣರಾದ ಸರಕಾರಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ರವಿ ರೇಡ್ಕರ ಹೇಳಿದ್ದಾರೆ.
ದಾಂಡೇಲಿ ಕಿರು ಜಲ ವಿದ್ಯುತ್ ಯೋಜನೆಯ ಹೆಸರಿನಲ್ಲಿ , ಮಾವಳಂಗಿ ಎಂಬಲ್ಲಿ ಆಣೆಕಟ್ಟು ನಿರ್ಮಿಸಿ 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜನಾ ವರದಿ ಮಂಡಿಸಿತ್ತು. ಯೋಜನೆಗೆ ಅನುಮೋದನೆ ದೊರಕಬೇಕಾದರೆ, ಯೋಜನಾ ಪ್ರದೇಶದ ಆಸುಪಾಸಿನ ಪರಿಸರ ಅಧ್ಯಯನ ನಡೆಸಿದ ಬಳಿಕ ಯೋಜನೆಯ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿ, ಜನಾಭಿಪ್ರಾಯ ಸಂಗ್ರಹಿಸುವುದು ಕಡ್ಡಾಯ. ಆದರೆ, ಈ ಯೋಜನೆಗಾಗಿ ಸಲ್ಲಿಸಲಾದ ಪರಿಸರ ಅಧ್ಯಯನ ವರದಿಯಲ್ಲಿ ವಿವರವಾಗಿ ವಿಶ್ಲೇಷಣೆ ನಡೆಸಿದ್ದು ಬೇರೊಂದು ಯೋಜನೆಗೆ ಸಂಬಂಧಿಸಿದ್ದು. ಯಲ್ಲಾಪುರ ತಾಲೂಕಿನ ಕಿರವತ್ತಿ ಎಂಬಲ್ಲಿ ಯೋಜಿಸಲಾದ ಬೇಡ್ತಿ-ತಟ್ಟಿ ಹಳ್ಳ ಯೋಜನೆಗೆ ಸಂಬಂಧಿಸಿದ ಪರಿಸರದ ಅದಾಗಿತ್ತು. ವರದಿಯಲ್ಲಿದ್ದ ಬೆರಳಚ್ಚುದೋಷಗಳು, ಸಾಲುಗಳ ಸಂಖ್ಯೆ, ಗ್ರಾಮಗಳ ಹೆಸರು ಎಲ್ಲವೂ ಒಂದೇ ರೀತಿಯಾಗಿತ್ತು. ಸಾರ್ವಜನಿಕ ವಿಚಾರಣಾ ಸಮಯದಲ್ಲಿ ಈ ಪ್ರಕರಣವನ್ನು ಬಯಲಿಗೆಳೆಯಲಾಯಿತು.
ಸಾರ್ವಜಿನಿಕ ವಿಚಾರಣೆಯ ಬಳಿಕ ಮುರ್ಡೇಶ್ವರ ವಿದ್ಯುತ್ ನಿಗಮದ ಯೋಜನೆಗಾಗಿ ಪರಿಸರ ಅಧ್ಯಯನ ವರದಿ ಸಲ್ಲಿಸಿದ್ದ ಅರ್ನೆಸ್ಟ್ ಆ್ಯಂಡ್ ಯಂಗ್ ಕಂಪೆನಿ, ವರದಿಯನ್ನು ಹಿಂದಕ್ಕೆ ಪಡೆದು, ಇದಕ್ಕೆ ಕಾರಣರಾದ ಅಧಿಕಾರಿಯ ವಿರುದ್ಧ ಕ್ರಮಕೈಗೊಂಡಿದೆ ಎಂದು ವರದಿಯಾಗಿತ್ತು.
ಸಾರ್ವಜನಿಕರಿಗೆ ಹಾಗೂ ಸರಕಾರದ ಪರಿಸರದ ವಿಷಯದಲ್ಲಿ ಸುಳ್ಳು ಮಾಹಿತಿ ನೀಡಿ, ತಪ್ಪು ದಾರಿಗೆಳೆದ ಅಪರಾಧಕ್ಕೆ ಕೇಂದ್ರ ಪರಿಸರ ಕಾಯ್ದೆಯನ್ವಯ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
(ಕಾರ-ವಾ-ರ ಪ್ರತಿ-ನಿ-ಧಿ-ಯಿಂ-ದ)