ಓಣಂ ರಂಗೋ-ಲಿ-ಯ ತುಂಬ ಮಳೆ-ಯ ತೇವ
ಬೆಂಗಳೂರು : ಮೊನ್ನೆ ನಮ್ಮ ಮೈಸೂರು ಪ್ರತಿನಿಧಿ ರಂಗನ ತಿಟ್ಟಿನ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ ಬಗ್ಗೆ ಸ್ವಲ್ಪ ಭಾವುಕರಾಗಿ ಹೇಳುತ್ತಿದ್ದರು. ಎಲ್ಲಿಂದಲೋ ಪಕ್ಷಿ ಧಾಮಕ್ಕೆ ಬಂದ ಹಕ್ಕಿಗಳು. ಕಣ್ಣ ತುಂಬಾ ಸಿಹಿ ಕನಸುಗಳ ಅಂಜನ ಹಾಕಿಕೊಂಡು ಮೊಟ್ಟೆ ಮರಿ ಅಂತ ಪಕ್ಷಿ ಧಾಮದ ತುಂಬಾ ಚುಂಯ್ಗುಟ್ಟುತ್ತಿದ್ದವು. ಆದರೆ ಕೆಆರ್ಎಸ್ನಿಂದ ಹೊರಟ ನೀರು ರಂಗನತಿಟ್ಟುವಿನ ತಗ್ಗು ಪ್ರದೇಶದಲ್ಲಿ ಅಮ್ಮನ ಮೆತ್ತನೆ ಪುಕ್ಕಗಳಡಿಯಲ್ಲಿ ಬೆಚ್ಚನೆ ಮಲಗಿದ್ದ ಮೊಟ್ಟೆಗಳು, ಹಾರಲಾರದೆ , ಬಲಿಯದ ರೆಕ್ಕೆಗಳನ್ನು ಅಲ್ಲಾಡಿಸುತ್ತಾ ಹಾರಲೆತ್ನಿಸುತ್ತಾ ಕೊಕ್ಕು ಬಿಡಿಸಿ ಅಮ್ಮನ ಸ್ಪರ್ಶಕ್ಕೆಳಸುತ್ತಿದ್ದ ಹಸಿ ಮೈಯ ಮರಿಗಳನ್ನು ನೀರು ಕೊಚ್ಚಿಕೊಂಡು ಹೋಯಿತು. ಅಮ್ಮ ಹಕ್ಕಿಗಳ ಕಣ್ಣ ತುಂಬಾ ಬರೀ ಮಂಜು ಮಂಜು...
ಲಿಂಗನಮಕ್ಕಿ ತುಂಬಿ ಧುಮುಗುಟ್ಟುತ್ತಿದೆ. ಇವತ್ತು ( ಸೆಪ್ಟೆಂಬರ್ 4) ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ತಮ್ಮ ಮನೆ ಮಕ್ಕಳು , ದನ ಕರು, ಹೊಲಗದ್ದೆ , ಆಫೀಸು ಕಂಪ್ಯೂಟರ್ ಎಂದುಕೊಂಡು ಸುರಿಯುವ ಮಳೆಹನಿಯೆಡೆಯಲ್ಲಿ ಕೊಡೆ ತೂರಿಸಿಕೊಂಡು ವ್ಯಸ್ತರಾಗಿದ್ದವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಎಚ್ಚರಿಕೆ ನೀಡಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುವುದರಿಂದ ತಗ್ಗು ಪ್ರದೇಶದಲ್ಲಿರುವವರು ಗಂಟು ಮೂಟೆ ಕಟ್ಟಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ರಾಜ್ಯಕ್ಕೆಲ್ಲ ಕರೆಂಟು ಬೇಕೆಂದರೆ ಲಿಂಗನಮಕ್ಕಿ ಜಲಾನಯನದ ತಗ್ಗು ಪ್ರದೇಶದಲ್ಲಿರುವವರು ವರ್ಷಕ್ಕೊಮ್ಮೆಯಾದರೂ ಹೀಗೆ ಗುಳೆ ಹೊರಡಬೇಕು. ಜಲಾಶಯ ಊರಿಗೆ ಹೊತ್ತು ತರುವ ನೀರು, ಜೊತೆಗೆ ಸಮಸ್ಯೆಗಳು ಎಲ್ಲ ಅವರಿಗೆ ಪರಿಚಿತ, ಆದರೆ ಹಿತವೇನಲ್ಲ.
ರಾಜ್ಯದಲ್ಲಿ ಕರಾವಳಿಯಲ್ಲಿ ಮಾತ್ರ ಹುಬ್ಬೆಯ ಮಳೆ ಸಂಪ್ರದಾಯಕ್ಕನುಗುಣವಾಗಿ ಸುರಿಯುತ್ತಿದೆ. ಬೆಳ್ತಂಗಡಿ, ಧರ್ಮಸ್ಥಳ, ಕುಂದಾಪುರದಲ್ಲಿ ಎರಡರಿಂದ ನಾಲ್ಕು ಸೆಂಟಿಮೀಟರ್ ಹನಿದಿದೆ. ಮಧುಗಿರಿ, ಶೃಂಗೇರಿ, ಬನವಾಸಿಗಳಿಗೂ ಎರಡೆರಡು ಸೆಂಟಿ ಮೀಟರ್ ಮಳೆಯ ಪ್ರಸಾದವಾಗಿದೆ. ಬೆಂಗಳೂರಿನಲ್ಲಿ ಕಿಟಕಿಯಿಂದ ಹೊರನೋಡಿದಾಗಲೆಲ್ಲಾ ಕಣ್ಣ ಚುಂಬಿಸುವ ಹನಿಗಳು.... ಇಂದು ಬೆಳಗ್ಗೆಯಿಂದ ಅತ್ತ ಜೋರಲ್ಲದ ಇತ್ತ ಕಡಿಮೆಯೆನಿಸದ ಮಳೆ ರಸ್ತೆಯಲ್ಲಿ ಕೊಚ್ಚೆಯೆಬ್ಬಿಸಿದೆ. ಮ-ಲ-ಯಾ-ಳಿ-ಗ-ಳೆಲ್ಲ ಓಣಂ ಆರಂಭ ಸೂಚಕವಾಗಿ ಮನೆಮುಂದೆ ಹಾಕಿದ ಪುಟ್ಟ ಪುಟ್ಟ ಹೂವಿನ ರಂಗೋಲಿ ಸಂಜೆಯಾದರೂ ಬಾಡಿಲ್ಲ.
ಮುನ್ಸೂಚನೆ ಕೇಳುತ್ತೀರಾ ? ಕರಾವಳಿಯಲ್ಲಿ ಗುಡುಗು, ಒನಕೆಧಾರೆಯ ಮಳೆ ಸುರಿಯಬಹುದು ಜಾಗ್ರತೆ ಎಂದು ಹವಾಮಾನ ಇಲಾಖೆಯವರು ಎಚ್ಚರಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೂಡ ಹನಿ ಹನಿ ಗುಬ್ಬಿ ಮಳೆ ಬರಬಹುದಂತೆ. ಈ ಭವಿಷ್ಯಕ್ಕೆ ಬುಧವಾರದವರೆಗೆ ಆಯುಸ್ಸಿದೆ.