ಟಾಡಾ ಅರ್ಜಿಯ ತ್ವರಿತ ಇತ್ಯರ್ಥ ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್
ನವದೆಹಲಿ : ಟಾಡಾ ಆರೋಪಿಗಳ ಬಿಡುಗಡೆ ಸಂಬಂಧದ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಕರ್ನಾಟಕ ಸರಕಾರ ಸಲ್ಲಿಸಿದ್ದ ಕೋರಿಕೆಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ತಳ್ಳಿಹಾಕಿದೆ. ತನ್ನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕರ್ನಾಟಕಕ್ಕೆ ಹತ್ತು ದಿನಗಳ ಕಾಲಾವಕಾಶವನ್ನೂ ನೀಡಿದೆ. ಆನಂತರ ಶೀಘ್ರ ವಿಚಾರಣೆಗೆ ಅಹವಾಲು ಸಲ್ಲಿಸಲು ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಆನಂದ್ ಹಾಗೂ ನ್ಯಾಯಮೂರ್ತಿಗಳಾದ ಎನ್. ಸಂತೋಷ್ ಹೆಗ್ಡೆ ಮತ್ತು ಕೆ.ಜಿ. ಬಾಲಕೃಷ್ಣನ್ ಅವರನ್ನು ಒಳಗೊಂಡ ನ್ಯಾಯಪೀಠವು, ಈಗಾಗಲೇ ಅಬ್ದುಲ್ ಕರೀಂ ಅವರು ಸಲ್ಲಿಸಿರುವ ವಿಶೇಷ ತೆರವು ಅರ್ಜಿ (ಎಸ್.ಎಲ್.ಪಿ.) ಸ್ವೀಕೃತವಾಗಿದ್ದು, ಆ ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥ ಪಡಿಸುವಂತೆ ಸೂಚಿಸುವುದು ಸಾಧ್ಯವಿಲ್ಲ ಎಂದು ಹೇಳಿದೆ.
ರಾಜ್ಯದ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ದಿನಾಂಕ ನಿಗದಿ ಪಡಿಸುವಂತೆ ಕರ್ನಾಟಕದ ಪರ ವಕಾಲತ್ತು ವಹಿಸಿದ್ದ ಹರೀಶ್ ಸಾಳ್ವೆ ಅವರು ಸರ್ವೋನ್ನತ ನ್ಯಾಯಾಲಯವನ್ನು ಕೋರಿದ್ದರು.
ರಾಜ್ಯ ಸರಕಾರಗಳಿಗೆ ಬಿಟ್ಟಿದ್ದು : ರಾಜ್ಕುಮಾರ್ ಅಪಹರಣ ಪ್ರಕರಣ ಹಾಗೂ ವೀರಪ್ಪನ್ ವಿಚಾರ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಗೆ ಬಿಟ್ಟಿದ್ದು ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಗೋವಿಂದಾಚಾರ್ಯ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಕೇಂದ್ರಕ್ಕೆ ಯಾವುದೇ ನಿರ್ದಿಷ್ಟ ಮನವಿ ಸಲ್ಲಿಸಿಲ್ಲ ಎಂದೂ ಅವರು ಹೇಳಿದರು. ಇಡೀ ಪ್ರಕರಣ ರಾಜ್ಯ ಸರಕಾರವೇ ಸೃಷ್ಟಿಸಿಕೊಂಡ ಸಮಸ್ಯೆ ಎಂದು ಕೇಂದ್ರ ಸಚಿವ ಧನಂಜಯ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು. ರಾಜ್ ಅಪಹರಣ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕಾಂಗ್ರೆಸ್ ಸರಕಾರ ಸೋತಿದೆ ಎಂದೂ ಅವರು ಟೀಕಿಸಿದರು.