ಸಂಧಾನ ವಿಫಲವಾದರೆ, ರಾಜ್ ಬಿಡುಗಡೆಗೆ ಹೊಸ ಕಾರ್ಯತಂತ್ರ: ಬಿಕೆಸಿ
ಬೆಂಗಳೂರು : ರಾಜ್ಕುಮಾರ್ ಅವರನ್ನು ಬಿಡಿಸಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ನೆರವನ್ನು ಪಡೆಯುವ ಸಾಧ್ಯತೆಗಳನ್ನು ಕರ್ನಾಟಕ ರಾಜ್ಯ ಸರಕಾರ ಸೋಮವಾರ ತಳ್ಳಿಹಾಕಿದೆ. ಮೂರನೇ ಬಾರಿ ಸಂಧಾನಕ್ಕಾಗಿ ಕಾಡಿಗೆ ತೆರಳಿರುವ ಗೋಪಾಲ್ ಅವರ ಪ್ರಯತ್ನ ವಿಫಲವಾದರೆ ಮಾತ್ರ, ರಾಜ್ಕುಮಾರ್ ಬಿಡುಗಡೆಗೆ ಹೊಸ ಕಾರ್ಯತಂತ್ರ ರೂಪಿಸುವ ಬಗ್ಗೆ ಚಿಂತಿಸಲಾಗುವುದು. ಈ ವಿಷಯವನ್ನು ರಾಜ್ಯ ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್ ಸೋಮವಾರ ತಿಳಿಸಿದ್ದಾರೆ.
ರಾಜ್ಕುಮಾರ್ ಬಿಡುಗಡೆ ಪ್ರಕ್ರಿಯೆ ಮುಂದುವರಿದಿದ್ದು, ಇನ್ನು ಮೂರ್ನಾಲ್ಕು ದಿನದಲ್ಲಿ ಕಾಡಿನಿಂದ ಖಚಿತ ಫಲಿತಾಂಶ ಹೊರಬೀಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಸರ್ವೋನ್ನತ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಚಿವ ಸಂಪುಟದ ತುರ್ತು ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ 4 ದಿನಗಳಿಂದ ಸಂಧಾನಕಾರ ಗೋಪಾಲ್ ಅವರು, ವೀರಪ್ಪನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಈ ವಿಷಯವನ್ನು ಕೇಂದ್ರ ಸರಕಾರಕ್ಕೂ ತಿಳಿಸಲಾಗಿದೆ. ರಾಜ್ಯ ಸರಕಾರ ಪರಿಸ್ಥಿತಿಯ ಬಗ್ಗೆ ಅಸಹಾಯಕವಾಗಿಲ್ಲ ಎಂದು ಹೇಳಿದರು.
ಈಗ ಗೋಪಾಲ್ ಹಾಗೂ ವೀರಪ್ಪನ್ ನಡುವೆ ನಡೆಯುತ್ತಿರುವ ಸಂಧಾನದ ಫಲಶ್ರುತಿ ಹೊರಬಿದ್ದ ನಂತರವಷ್ಟೇ ಹೊಸ ಕಾರ್ಯತಂತ್ರದ ಬಗ್ಗೆ ಯೋಚಿಸಲಾಗುವುದು ಎಂದವರು ಸ್ಪಷ್ಟಪಡಿಸಿದರು.