ರೀ... ನಾನು ಕಳಿಸಿರೋ ಹಾರ ಹಾಕಳ್ಳಿ, ವೀಭೂತಿ ಇಟ್ಕೊಳ್ಳಿ....
ಬೆಂಗಳೂರು : ಮತ್ತೊಂದು ಕ್ಯಾಸೆಟ್ ಕೈಸೇರಿ ರಾಜ್ ನಿವಾಸದಲ್ಲಿ ಆತಂಕ ಹೆಚ್ಚುತ್ತಿರುವಾಗ ರಾಜ್ಕುಮಾರ್ ಕುಟುಂಬದ ಸಂದೇಶವನ್ನು ಬೆಂಗಳೂರು ಆಕಾಶವಾಣಿ ಕೇಂದ್ರವು ಶನಿವಾರ ಸಂಜೆ ಪದೇಪದೇ ಪ್ರಸಾರ ಮಾಡಿತು. ರಾಜ್ಗೆ ಧೈರ್ಯ ತುಂಬುವ ಈ ಸಂದೇಶದಲ್ಲಿ ಪಾರ್ವತಮ್ಮ ರಾಜ್ಕುಮಾರ್, ಶಿವರಾಜ್ಕುಮಾರ್, ಪೂರ್ಣಿಮಾ (ರಾಜ್ ಪುತ್ರಿ), ರಾಜ್ ತಂಗಿ ಹಾಗೂ ಮೊಮ್ಮಗಳು ಮಮತಾ ಮಾತನಾಡಿದ್ದಾರೆ.
ಪಾರ್ವತಮ್ಮ ರಾಜಕುಮಾರ್ : ರೀ.. ಕ್ಯಾಸೆಟ್ ಕೇಳಿದ್ವಿ. ನೀವು ತುಂಬಾ ನೆಗಡಿ, ಕೆಮ್ಮು ಅಂತ ಹೇಳಿದ್ದೀರಿ. ಗಾಭರಿ ಆಗಬೇಡಿ, ನಾವು ಕಳಿಸಿರೋ ಮಾತ್ರೆ ಮರೀದ ತಗೋಳಿ. ನೀವು ಇಲ್ದೆ ಇಲ್ಲಿ ಬೇಜಾರಾಕ್ತಿದೆ. ಬೇಗ ಬಂದು ಬಿಡಿ. ಇವತ್ತೋ ನಾಳೇನೋ ಬಂದ್ರೆ ಒಳ್ಳೇದು. ರೀ ನಿಮಗೆ ಗೋಪಾಲ್ ಜತೆ ಹಾರ ಕಳಿಸಿದೀನಿ. ಅದನ್ನು ಹಾಕಿಕೊಳ್ಳಿ ಮರೀಬೇಡಿ, ವೀಭೂತಿ ಇದೆ. ನೀವು, ನಾಗೇಶ, ನಾಗಪ್ಪ, ಗೋವಿಂದ್ರಾಜ್ ಎಲ್ಲ ಹಚ್ಚಿಕೊಳ್ಳಿ.
ರೀ ನಿಮ್ಮನ್ನು ನೋಡಿ 35 ದಿನ ಆಯ್ತು, ಬೇಗ ನೋಡೋ ಆಸೆ, ಬನ್ನಿ ಅಂದ್ರೆ... ವರದಪ್ಪ, ಮಕ್ಳು, ನಾಗಪ್ಪನ ಮನೆಲಿ ಎಲ್ಲ, ನಾಗೇಶನ ಹೆಂಡ್ತಿ , ಮಗು ಎಲ್ಲ ಚೆನ್ನಾಗಿದಾರೆ ಯಾರೂ ಯೋಚ್ನೆ ಮಾಡಬೇಡಿ. ಜಾಸ್ತಿ ನಡೀಬೇಡಿ. ಮಂಡಿ ನೋವು ಬರುತ್ತೆ. ಆರೋಗ್ಯ ನೋಡ್ಕಳಿ, ನಾಗೇಶ್, ನಾಗಪ್ಪ, ರಾಜುಗೆ ಕೇಳಿದೆ ಅಂತ ಹೇಳಿ.
ಪೂರ್ಣಿಮಾ: (ಅಪಹರಣಾನಂತರ ಪ್ರಥಮ ಬಾರಿಗೆ ರಾಜ್ ಪುತ್ರಿ ಪೂರ್ಣಿಮಾ ಮಾತನಾಡಿದ್ದಾರೆ) ಅಪ್ಪಾಜಿ ನಾನು ಪೂರ್ಣಿಮಾ, ಲಾಸ್ಟ್ ಟೈಮ್ ನಿಮ್ಮ ಕ್ಯಾಸೆಟ್ ನೋಡಿ ಬಹಳ ಬೇಜಾರಾಯ್ತು. ಬೇಗ 2,3, ದಿನದಲ್ಲೇ ಬಂದು ಬಿಡಿ ಅಪ್ಪಾಜಿ, ನಾವೆಲ್ಲಾ ವೈಟ್ ಮಾಡ್ತಾ ಇದ್ದೀವಿ. ಬೇಗ ಬನ್ನಿ ಅಪ್ಪಾಜಿ. ಅಶ್ವಿನಿ ನಿಮ್ಮ ತುಂಬಾ ಕೇಳಿದ್ಲು. ಎಲ್ಲ ಇಲ್ಲಿ ಚೆನ್ನಾಗಿದಾರೆ. ಲಕ್ಷ್ಮೀ ಚೆನ್ನಾಗಿದ್ದಾಳೆ. ಎಲ್ಲರಿಗೂ ಕೇಳ್ದೇ ಅಂತ ಹೇಳಿ ಅಪ್ಪಾಜಿ.
ಶಿವರಾಜ್ ಕುಮಾರ್ : ನಾನು ಶಿವಣ್ಣ ಮಾತಾಡ್ತಿದ್ದೀನಿ ಅಪ್ಪಾಜಿ. ಎಲ್ಲರನ್ನೂ ನಾವು ಕೇಳ್ಕೊತಾ ಇದ್ದೀವಿ. ವೀರಪ್ಪನ್ ಅನ್ನು ಕೇಳ್ಕೊಂಡಿದ್ದೀವಿ. ಬೇಗ ಬಿಡಿ ಅಂತ ಅಂಗಲಾಚಿದ್ದೀವಿ. ನೀವು ಬೇಗ ಬನ್ನಿ ಅಪ್ಪಾಜಿ. ದೇವರ ಆಶೀರ್ವಾದ ಬೇಕು. ಎಲ್ಲರನ್ನೂ ಕೇಳಿದೆ ಅಂತ ಹೇಳಿ. ಇಲ್ಲಿ ಗಲಾಟೆ ಆಗೋ ಸಂಭವ ಇಲ್ಲ. ನೀವು ಕನ್ನಡದೋರ್ಗೂ, ತಮಿಳಿನೋರ್ಗೋ ಬೇಕು. ತಮಿಳಿನೋರ್ಗೂ, ಮಲೆಯಾಳಂನೋರ್ಗೂ, ತೆಲುಗುನೋರ್ಗೂ ಎಲ್ಲಾರ್ಗೂ ಬೇಕು. ದೇವರಲ್ಲಿ ನಂಬಿಕೆ ಇಡಿ ಅಪ್ಪಾಜಿ. ಎಲ್ಲ ಒಳ್ಳೇದಾಗತ್ತೆ.
ರಾಜ್ ಸೋದರಿ : ಅಣ್ಣಾ ಬೇಗ ಬಾಣ್ಣ, ನಿನ್ನ ಬಿಟ್ಟಿರೋಕೆ ಆಗಲ್ಲ. ವೀರಪ್ಪನ್ಗೆ ಹೇಳಣ್ಣ ಬೇಗ ಬಿಡು ಅಂತ, ಬಾಣ್ಣಾ.
ಮಮತಾ : ತಾತಾ ನಾನು ಮಮತಾ. ತಾತಾ ನೀನು ಇಲ್ದೇ ತುಂಬಾ ಬೇಜಾರಾಕ್ತಾ ಇದೆ ತಾತ. ತುಂಬಾ ದುಃಖ ಆಕ್ತಾ ಇದೆ. ನಿವಿಲ್ದೇ ಇರಾಕೆ ಆಗೋಲ್ಲ. ಬೇಗ ಬನ್ನಿ ತಾತಾ...