ದೀನ್ದಾರ್ ಸಂಘಟನೆಯ ವಿರುದ್ಧ ಕೇಂದ್ರದ ಕ್ರಮ : ಆಡ್ವಾಣಿ
ನವದೆಹಲಿ : ಕರ್ನಾಟಕದ ವಾಡಿ, ಹುಬ್ಬಳ್ಳಿ, ಬೆಂಗಳೂರೂ ಸೇರಿದಂತೆ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳ ಚರ್ಚ್ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣ ಎನ್ನಲಾದ ದೀನ್ದಾರ್ ಅಂಜುಮನ್ ಸಂಘಟನೆಯ ವಿಷಯ ಶುಕ್ರವಾರ ಲೋಕಸಭೆಯಲ್ಲಿಯೂ ಪ್ರತಿಧ್ವನಿಸಿತು.
ಈ ಉಗ್ರಗಾಮಿ ಸಂಘಟನೆಯ ವಿರುದ್ಧ ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಎಲ್.ಕೆ. ಆಡ್ವಾಣಿ ಲೋಕಸಭೆಗೆ ತಿಳಿಸಿದರು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾಕರ ಮೇಲಿನ ದೌರ್ಜನ್ಯದ ವಿಷಯದ ಮೇಲಿನ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಂಜುಮನ್ ಸಂಘಟನೆಯ ವಿಷಯವೂ ಪ್ರಸ್ತಾಪವಾಯಿತು. ಈ ಹಂತದಲ್ಲಿ ಉತ್ತರ ನೀಡಿದ ಸಚಿವರು ದೀನ್ದಾರ್ ಅಂಜುಮನ್ ಸಂಘಟನೆಯ 35 ಜನರನ್ನು ಈಗಾಗಲೇ ಬಂಧಿಸಲಾಗಿದ್ದು, ಮಹತ್ವದ ಸುಳಿವು ದೊರೆತಿದೆ ಅಲ್ಲದೆ ಇತರ 60 ಜನರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ಸಂಘಟನೆ ಕಾರ್ಯಾಚರಣೆ ನಡೆಸುತ್ತಿರುವ ರಾಜ್ಯಗಳ ಅಭಿಪ್ರಾಯವನ್ನು ಮೊದಲು ಪಡೆದು ಆನಂತರ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಡ್ವಾಣಿ ಸ್ಪಷ್ಟಪಡಿಸಿದರು. ರಾಜ್ಯದ ಮುಖ್ಯಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರುಗಳ ಸಭೆಯಲ್ಲಿ ಪಕ್ಷಭೇದ ಮರೆತು ಯಾವುದೇ ಆತಂಕ ಅಥವಾ ಪ್ರಭಾವಕ್ಕೆ ಹೆದರದೆ ದೃಢವಾಗಿ ಕರ್ತವ್ಯ ನಿರ್ವಹಿಸುವಂತೆ ನೀಡಿದ ಸೂಚನೆ ಫಲಕಾರಿಯಾಯಿತು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಒಳಸಂಚನ್ನು ಭೇದಿಸಿದ್ದೇ ಸರಕಾರದ ಸಾಧನೆಯಲ್ಲ ಎಂದ ಅವರು , ಇಂತಹ ಸಂಘಟನೆಗಳನ್ನು ಹತ್ತಿಕ್ಕಲು ವಿರೋಧ ಪಕ್ಷಗಳ ಸಹಕಾರವನ್ನು ಕೋರಿದರು. ದೀನ್ದಾರ್ ಸಂಘಟನೆಯನ್ನು ಇಸ್ಲಾಂ ಧರ್ಮದ ಅಂಗವೆಂದು ಭಾರತೀಯ ಮುಸ್ಲಿಮರು ಎಂದೂ ಭಾವಿಸಿಲ್ಲ ಎಂದು ಇಂಡಿಯನ್ ಮುಸ್ಲಿಂ ಲೀಗ್ನ ಜಿ.ಎಂ. ಬನತ್ವಾಲಾ ಲೋಕಸಭೆಗೆ ತಿಳಿಸಿದರು.
ಅಲ್ಪಸಂಖ್ಯಾಕರ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ಆದರೆ, ಇದೇ ವೇಳೆಯಲ್ಲಿ ಅಲ್ಪ ಸಂಖ್ಯಾಕರನ್ನು ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಪ್ರೇರೇಪಿಸುವ ಹಿತಾಸಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಡ್ವಾಣಿ ತಿಳಿಸಿದರು.
ಸಿಬಿಐ ತನಿಖೆಗೆ ಒತ್ತಾಯ : ಈ ಮಧ್ಯೆ ದೀನ್ದಾರ್ ಅಂಜುಮನ್ ಸಂಘಟನೆಯ ಚಟುವಟಿಕೆಗಳ ಬಗ್ಗೆ ಸಿಬಿಐನಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ವಾಯುಪಡೆ ಅಧಿಕಾರಿಯಾಬ್ಬರು ಪಾಕ್ ಬೆಂಬಲಿತ ದೀನ್ದಾರ್ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವುದು ಆತಂಕಕಾರಿ ವಿಷಯ ಎಂದೂ ಅದು ಹೇಳಿದೆ.