ಹಲವೆಡೆ ಸುರಿದಿದೆ ಮಳೆ
ಬೆಂಗಳೂರು : ಮಳೆಯಿಲ್ಲ, ಮಳೆಯಾಗಿಲ್ಲ, ಈ ಬಾರಿ ಮಳೆ ನಮಗೆ ಕೈಕೊಟ್ಟಿತು ಎಂದು ಹಲುಬುತ್ತಿದ್ದ ಜಿಲ್ಲೆಗಳಲ್ಲಿಯೂ ಕಳೆದೆರಡು ದಿನಗಳಿಂದ ಮಳೆ ಬೀಳುತ್ತಿದೆ. ಮಳೆ ಬೀಳಲಪ್ಪ ಎನ್ನುತ್ತಿದ್ದವರು, ಸುರಿಯುತ್ತಿರುವ ಭಾರಿ ಮಳೆ ತಂದೊಡ್ಡಿರುವ ಹಾನಿಗೆ ಹೆದರಿ, ಈಗ ಮಳೆ ನಿಂತರೆ ಸಾಕಪ್ಪ ಎನ್ನುತ್ತಿದ್ದಾರೆ.
ನೀರಿಗಾಗಿ ಹಾಹಾಕಾರ ಪಡುತ್ತಿದ್ದ ತಾಲೂಕುಗಳಲ್ಲಿಯೂ ಮಳೆ ಸುರಿಯುತ್ತಿದೆ. ಮನೆಗಳು, ಮರಗಳು ನೆಲಕಚ್ಚಿವೆ. ಕೆಲವೆಡೆ ಮನೆ ಕುಸಿದು ಸಾವು - ನೋವು ಸಂಭವಿಸಿದೆ. ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಭಾರಿ ಮಳೆ ಆಗಿದೆ. ಶ್ರೀನಿವಾಸಪುರದಲ್ಲಿ 9, ದೇವನಹಳ್ಳಿಯಲ್ಲಿ 7, ಚಿತ್ರದುರ್ಗದಲ್ಲಿ 6, ಅಂಕೋಲದಲ್ಲಿ 5, ಭಟ್ಕಳ, ಚಿಂತಾಮಣಿ, ಪಾವಗಡಗಳಲ್ಲಿ 4, ಬೀದರ್, ಕಲಘಟಗಿ, ಮೈಸೂರು 3, ಯಲಹಂಕ, ಮಂಕಿ ಹಾಗೂ ನರಸಿಂಹರಾಜ ಪುರಗಳಲ್ಲಿ ತಲಾ 2 ಸೆಂಟಿ ಮೀಟರ್ ಮಳೆ ಆಗಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ತುಂತುರು ಮಳೆ ಬೀಳುವ ನಿರೀಕ್ಷೆ ಇದೆ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಆಗುವ ಸಂಭವ ಇದೆ.